ADVERTISEMENT

ನೆಮ್ಮದಿಯ ನಾಳೆಗಾಗಿ ಕಾಡು ಸಂರಕ್ಷಿಸಿ: ವೀರೇಂದ್ರ ಹೆಗ್ಗಡೆ ಸಲಹೆ

ಜಮಲಾಬಾದ್ ತಪ್ಪಲಿನಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 2:58 IST
Last Updated 2 ಆಗಸ್ಟ್ 2021, 2:58 IST
ಉಜಿರೆಯ ಬದುಕು ಕಟ್ಟೋಣ ತಂಡ, ಅರಣ್ಯ ಇಲಾಖೆ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜಮಲಾಬಾದ್ ತಪ್ಪಲಿನ ಕೂಡೇಲು ಎಂಬಲ್ಲಿ ‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಉಜಿರೆಯ ಬದುಕು ಕಟ್ಟೋಣ ತಂಡ, ಅರಣ್ಯ ಇಲಾಖೆ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜಮಲಾಬಾದ್ ತಪ್ಪಲಿನ ಕೂಡೇಲು ಎಂಬಲ್ಲಿ ‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.   

ಉಜಿರೆ: ಮುಂದಿನ ಪೀಳಿಗೆಗೆ ಸುಖ- ಶಾಂತಿ, ನೆಮ್ಮದಿಯ ಜೀವನಕ್ಕಾಗಿ ನಾವೆಲ್ಲರೂ ಕಾಡುಗಳ ರಕ್ಷಕರಾಗಬೇಕು. ಅರಣ್ಯ ಸಂಪತ್ತು ರಕ್ಷಿಸುವ ಯೋಜನೆ ರಾಷ್ಟ್ರವ್ಯಾಪಿ ಆಂದೋಲನವಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆಯ ಬದುಕು ಕಟ್ಟೋಣ ತಂಡ, ಅರಣ್ಯ ಇಲಾಖೆ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜಮಲಾಬಾದ್ ತಪ್ಪಲಿನ ಕೂಡೇಲು ಎಂಬಲ್ಲಿ ‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಾಗತಿಕ ತಾಪಮಾನ ಏರಿಕೆಯಿಂದ ಹಿಮ ಕರಗುತ್ತಿದೆ. ಪ್ರಾಕೃತಿಕ ಅಸಮತೋಲನದಿಂದಾಗಿ ಪ್ರಾಣಿಗಳು ಆಹಾರ ಸಿಗದೆ ನಾಡಿಗೆ ಬಂದು ಕೃಷಿಗೆ ಹಾನಿ ಉಂಟು ಮಾಡುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡ ಬೆಳೆಸುವ ಪ್ರಸ್ತಾವವನ್ನು ಅರಣ್ಯ ಸಚಿವ ಲಿಂಬಾವಳಿ ಅವರಿಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಅವರು, ಧರ್ಮಸ್ಥಳದಲ್ಲಿಯೇ ನೂತನ ಯೋಜನೆ ಉದ್ಘಾಟಿಸಿ ಅರಣ್ಯ ಇಲಾಖೆಯಿಂದ ಪೂರ್ಣ ಸಹಕಾರದ ಭರವಸೆ ನೀಡಿ ದರು. ಇದೀಗ ಕಾರ್ಯಕ್ರಮ ರಾಜ್ಯವ್ಯಾಪಿ ಯಾಗಿ ಪಸರಿಸಿದ್ದು, ನಾವು ನೆಟ್ಟ ಹಣ್ಣಿನ ಗಿಡಗಳ ರಕ್ಷಣೆಯನ್ನು ಮಕ್ಕಳಿಗೆ ವಹಿಸ ಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ನೂರು ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಹಣ್ಣಿನ ಗಿಡ ನಾಟಿ ಕಾರ್ಯ ರಾಷ್ಟ್ರೀಯ ಆಂದೋಲನವಾಗಬೇಕು ಎಂದರು.

ರಂಗ ಕಲಾವಿದ ಅರವಿಂದ ಬೋಳಾರ್ ಶುಭ ಹಾರೈಸಿದರು. ಉಜಿರೆಯ ಮೋಹನ್ ಕುಮಾರ್, ರಾಜೇಶ್ ಪೈ, ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ, ವಕೀಲ ಧನಂಜಯ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಸಲ್ಡಾನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.