ADVERTISEMENT

ಚಿಕ್ಕಮಗಳೂರು: ಭದ್ರಾ ಹಿನ್ನೀರಿನಲ್ಲಿ ಪ್ರವಾಸಿ ತಾಣ

ಎನ್.ಆರ್.ಪುರ ಸಮೀಪ 3 ಎಕರೆ ಹಸ್ತಾಂತರ: ಜಲಸಾಹಸ ಕ್ರೀಡೆ ಜತೆಗೆ ಥೀಮ್ ಪಾರ್ಕ್

ವಿಜಯಕುಮಾರ್ ಎಸ್.ಕೆ.
Published 25 ಮಾರ್ಚ್ 2025, 5:46 IST
Last Updated 25 ಮಾರ್ಚ್ 2025, 5:46 IST
<div class="paragraphs"><p>ಎನ್.ಆರ್.ಪುರ ತಾಲ್ಲೂಕಿನ ಹೊನ್ನೆಕೂಡಿಗೆ ಸೇತುವೆ ಬಳಿ ಭದ್ರಾ ಹಿನ್ನೀರಿನಲ್ಲಿ ಪ್ರವಾಸಿ ತಾಣ ಅಭಿವೃದ್ಧಿಗೆ ಗುರುತಿಸಿರುವ ಜಾಗ</p></div>

ಎನ್.ಆರ್.ಪುರ ತಾಲ್ಲೂಕಿನ ಹೊನ್ನೆಕೂಡಿಗೆ ಸೇತುವೆ ಬಳಿ ಭದ್ರಾ ಹಿನ್ನೀರಿನಲ್ಲಿ ಪ್ರವಾಸಿ ತಾಣ ಅಭಿವೃದ್ಧಿಗೆ ಗುರುತಿಸಿರುವ ಜಾಗ

   

ಚಿಕ್ಕಮಗಳೂರು: ನರಸಿಂಹರಾಜಪುರ ತಾಲ್ಲೂಕಿನ ಭದ್ರಾ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಜಾಗದಲ್ಲಿ ಪ್ರವಾಸಿ ತಾಣವೊಂದನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಹಿನ್ನೀರಿನ ಪಕ್ಕದಲ್ಲೇ ಇರುವ 3 ಎಕರೆಯನ್ನು ಪ್ರವಾಸೋದ್ಯಮ ಇಲಾಖೆಗೆ ಕಂದಾಯ ಇಲಾಖೆ ವರ್ಗಾಯಿಸಿದೆ.

ಎನ್.ಆರ್.ಪುರ ತಾಲ್ಲೂಕಿಗೂ ಪ್ರವಾಸಿ ತಾಣವನ್ನು ವಿಸ್ತರಿಸಲು ಇಲಾಖೆ ಯೋಜನೆ ರೂಪಿಸಿದೆ. ಕೆಎಸ್‌ಟಿಡಿಸಿ (ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಮೂಲಕ ರೆಸಾರ್ಟ್‌ ಮಾದರಿಯಲ್ಲಿ ಐಷಾರಾಮಿ ಹೋಟೆಲ್‌, ಥೀಮ್‌ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. 

ADVERTISEMENT

ಎನ್.ಆರ್.ಪುರ ತಾಲ್ಲೂಕಿನವರೇ ಆದ ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ಈ ಯೋಜನೆಗೆ ಆಸಕ್ತಿ ವಹಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದರು. ‘ಜಲಾಶಯದ ಹಿನ್ನೀರಿನ ವಿಹಂಗಮ ನೋಟವನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಜಲಸಾಹಸ ಕ್ರೀಡೆ, ಹೋಟೆಲ್, ಕೆಫೆಟೇರಿಯಾ ಸೇರಿ ಇನ್ನಿತರ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ಸೂಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದರು.

ರಾವೂರು ಸರ್ವೆ ನಂ. 159ರಲ್ಲಿ ಒಟ್ಟು 16 ಎಕರೆ ಜಾಗವಿದ್ದು, ಅರಣ್ಯ ಇಲಾಖೆಯ ಸೆಕ್ಷನ್–4, ಪರಿಭಾವಿತ ಅರಣ್ಯ –1 ಮತ್ತು 2ರ ವ್ಯಾಪ್ತಿಯಲ್ಲಿ ಇಲ್ಲದ 3 ಎಕರೆಯನ್ನು ಪ್ರವಾಸೋದ್ಯಮ ಇಲಾಖೆಗೆ ಕಂದಾಯ ಇಲಾಖೆ ಹಸ್ತಾಂತರ ಮಾಡಿದೆ.

ರ‍್ಯಾಫ್ಟಿಂಗ್‌, ನೇಚರ್ ವಾಕ್, ಗ್ರೀನ್ ವಾಕ್, ಜಂಗಲ್ ಕ್ಯಾಂಪ್, ಬ್ಯಾಮ್ ಬೂ ಕ್ರೋವ್, ರೆಸಾರ್ಟ್ ಒಳಗೊಂಡ ವಿನ್ಯಾಸವನ್ನೂ ಮಾಡಿಸಲಾಗಿದೆ. ಅದರ ಪ್ರಕಾರ ₹10 ಕೋಟಿ ವೆಚ್ಚವಾಗಲಿದೆ. ಆದರೆ, ಹಣಕಾಸಿನ ಮೂಲವನ್ನು ಕೆಎಸ್‌ಟಿಡಿಸಿ ಪರಿಶೀಲಿಸುತ್ತಿದೆ.

ಸರ್ಕಾರದಿಂದ ಅಷ್ಟು ಅನುದಾನ ಸಿಗದಿದ್ದರೆ, ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದೇ ಎಂಬ ಆಲೋಚನೆ ನಡೆಸುತ್ತಿದೆ. ಎರಡೂ ಸಾಧ್ಯವಾಗದಿದ್ದರೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಹೋಟೆಲ್ ಮತ್ತು ಜಲಸಾಹಸ ಕ್ರೀಡೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಆ ಮೂಲಕ ಎನ್.ಆರ್.ಪುರದ ಹಿನ್ನೀರಿನಲ್ಲಿ ಪ್ರವಾಸಿ ತಾಣವೊಂದು ತಲೆ ಎತ್ತಲಿದೆ.

ಸರ್ಕಾರದಿಂದ ಅನುದಾನದ ಅಗತ್ಯವಿಲ್ಲ. ಜಾಗ ಒದಗಿಸಿದರೆ ಹೋಟೆಲ್, ಕೆಫೆಟೇರಿಯಾ ಒಳಗೊಂಡು ಜಲಸಾಹಸ ಕ್ರೀಡೆಗಳ ತಾಣವನ್ನು ಖಾಸಗಿ ಏಜೆನ್ಸಿಗಳು ನಿರ್ವಹಿಸಲಿವೆ. ಅದಕ್ಕೆ ಬೇಕಿರುವ ತಯಾರಿ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಅನುದಾನಕ್ಕೆ ಪ್ರಯತ್ನ’

ಹೊನ್ನೇಕೂಡಿಗೆ ಸೇತುವೆ ನಿರ್ಮಾಣವಾಗುತ್ತಿದ್ದು ಅದರ ಪಕ್ಕದಲ್ಲೇ ಹಿನ್ನೀರಿನ ವಿಹಂಗಮ ನೋಟ ಇದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಜಾಗ ಸೂಕ್ತವಿದೆ ಎಂದು ನಿರ್ಧರಿಸಿ ಪ್ರಕ್ರಿಯೆ ಆರಂಭಿಸಲಾಯಿತು ಎಂದು ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು. ‘ಥೀಮ್‌ ಪಾರ್ಕ್ ವಾಟರ್ ಪಾರ್ಕ್ ಅಮ್ಯೂಸ್ಮೆಂಟ್ ಪಾರ್ಕ್‌ಗಳ ಜೊತೆಗೆ ಕಾಟೇಜ್‌ಗಳನ್ನು ಮಾಡಬೇಕು ಎಂದು ಉದ್ದೇಶಿಸಲಾಗಿದೆ. ಕಂದಾಯ ಇಲಾಖೆ ಜಾಗ ಹಸ್ತಾಂತರ ಮಾಡಿದೆ. ಅನುದಾನ ಪಡೆಯುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ. ಸಿಗದಿದ್ದರೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅವಕಾಶ ಇದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.