ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿಯೊಂದಿಗೆ ‘ಭದ್ರಬಾಲ್ಯ’ ಎಂಬ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ತಿಳಿಸಿದರು.
‘ಎಲ್ಲಾ ಇಲಾಖೆಗಳನ್ನೂ ಒಳಗೊಂಡು ಮಕ್ಕಳ ಕೇಂದ್ರಿತ ಯೋಜನೆ ರೂಪಿಸಲಾಗಿದೆ. ಮಕ್ಕಳೇ ಮುಂದಿನ ಭವಿಷ್ಯ ಆಗಿರುವುದರಿಂದ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಬಾಲ್ಯ ವಿವಾಹ, ಬಾಲ ಗರ್ಭಧಾರಣೆ, ಲೈಂಗಿಕ ದೌರ್ಜನ್ಯ, ಪೋಕ್ಸೊ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ವಿವರಿಸಿದರು.
ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಾರಣಗಳನ್ನು ಹುಡುಕಲಾಗಿದೆ. ಶಾಲೆ ಬಿಟ್ಟ ಮಕ್ಕಳೇ ಹೆಚ್ಚಿನದಾಗಿ ಈ ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರೂ ಆಗುವ ಸಂಭವ ಹೆಚ್ಚಿದೆ ಎಂದರು.
ಪೋಷಕರಲ್ಲಿ ತಿಳಿವಳಿಕೆ ಕೊರತೆಯಿಂದ ಮಕ್ಕಳು ಶಾಲೆ ಬಿಟ್ಟು ಬಾಲ್ಯ ವಿವಾಹವಾಗುತ್ತಿದ್ದಾರೆ. 18 ವರ್ಷಕ್ಕಿಂತ ಮೊದಲೇ ಮದುವೆ ಮಾಡಬಾರದು ಎಂಬ ಅರಿವು ಅವರಿಗೆ ಇಲ್ಲ. ಮಕ್ಕಳಿಗೂ ತಿಳಿವಳಿಕೆ ಇಲ್ಲ. ಆದ್ದರಿಂದ ಶಾಲೆಗಳ ಹಂತದಲ್ಲೇ ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಲೆಯಲ್ಲಿ ಪ್ರಾರ್ಥನೆ ವೇಳೆ ಶುಭಾಷಿತ ಓದಿಸುವ ಜತೆಗೆ ಬಾಲ್ಯ ವಿವಾಹ ತಪ್ಪು ಎಂಬ ಸಂದೇಶಗಳನ್ನು ಓದಿಸಲಾಗುತ್ತಿದೆ. ಭವಿಷ್ಯದಲ್ಲಿ ಮಗು ಏನಾಗಬೇಕು ಎಂಬುದನ್ನು ನಿರ್ಧರಿಸಿ ಅದರತ್ತ ಗಮನ ಹರಿಸಲು ಪ್ರತಿ ಶಾಲೆಯಲ್ಲಿ ಗೋಡೆಗಳ ಮೇಲೆ ಬರೆಸಲಾಗುತ್ತಿದೆ. ಸಾಧಕ ಹಿರಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗುಂಪು ರಚಿಸಿ ಮಾರ್ಗದರ್ಶನ ಕೊಡಿಸಲಾಗುತ್ತಿದೆ ಎಂದರು.
ಸ್ಥಳೀಯ ಮಾದರಿ ವ್ಯಕ್ತಿಗಳಿಂದ ಮಾರ್ಗದರ್ಶನ, ಅಧಿಕಾರಿಗಳು ಮತ್ತು ಉನ್ನತ ಹುದ್ದೆಯಲ್ಲಿ ಇರುವುವರನ್ನು ತಾವು ಓದಿದ ಶಾಲೆಗೆ ಕಳಿಸಿ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕಿ ಎಚ್.ಎಸ್.ಸುಜಾತಾ ಮಾತನಾಡಿ, ‘ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ. ಕಡೂರು ತಾಲೂಕಿನಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಅದನ್ನು ತಡೆಯಲು ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಹೇಳಿದರು.
ರೈತರೊಂದಿಗೆ ಸರ್ಕಾರ ಇದೆ ಎಂದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ರೈತ ಸಂಜೀವಿನಿ ಯೋಜನೆಯ ಮೂಲಕ ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಜೆ.ಪುಟ್ಟರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.