ADVERTISEMENT

ಸಂಸದರ ಅನುಪಸ್ಥಿತಿಯಲ್ಲಿ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆ: ಬಿಜೆಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:20 IST
Last Updated 3 ಡಿಸೆಂಬರ್ 2025, 7:20 IST
ದಿನೇಶ್
ದಿನೇಶ್   

ಕೊಪ್ಪ: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಅನುಪಸ್ಥಿತಿಯಲ್ಲಿ ನಡೆಸಿರುವುದನ್ನು ಬಿಜೆಪಿ ಖಂಡಿಸಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸುವುದು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಮೊದಲ ಹಂತದಲ್ಲಿ ಮಹಾನಗರ ಪಾಲಿಕೆ, ನಗರ ಸಭೆಗೆ ವ್ಯಾಪ್ತಿಯಲ್ಲಿ, ನಂತರ ಪುರಸಭೆ, ಪಟ್ಟಣ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಆಡಳಿತ ಮಾಡಲು ಕಾಂಗ್ರೆಸ್ ಬಿಟ್ಟಿಲ್ಲ. ಅಧಿಕಾರ ಕೇಂದ್ರೀಕರಣ ಮಾಡಿದೆ’ ಎಂದು ದೂರಿದರು.

ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕುಪತ್ರ ಕೊಟ್ಟಿರುವುದಕ್ಕೆ ಸ್ವಾಗತ. ಮಾಜಿ ಶಾಸಕ ಜೀವರಾಜ್ ಅವರು 11 ಎಕರೆ ಮಂಜೂರು ಮಾಡಿಸಿದ್ದರು. ಅವರು ಬುನಾದಿ ಹಾಕಿದ್ದ ಕೆಲಸವನ್ನೇ ಈಗಿನ ಶಾಸಕರು ಮುಂದುವರಿಸುತ್ತಿದ್ದಾರೆ. ಶಾಸಕ ರಾಜೇಗೌಡ ಅವರು ತಾವು ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಕ್ಕುಪತ್ರ ಕೊಡಲು ನಾವು(ಬಿಜೆಪಿ) ಯಾವುದೇ ಕಾನೂನು ತಂದು ಅಡ್ಡಿ ಮಾಡಿಲ್ಲ, ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.

ADVERTISEMENT

ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಯಪುರ ಆಸ್ಪತ್ರೆ ನಮ್ಮ ಸರ್ಕಾರ ಮಂಜೂರು ಮಾಡಿದೆ. ಜಯಪುರ, ವಸ್ತಾರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡುವಂತೆ ಶ್ರೀನಿವಾಸ್ ಪೂಜಾರಿ ಅವರು ಪ್ರಧಾನಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಪಟ್ಟಣದಲ್ಲಿ ವಸತಿ ರಹಿತರಿಗೆ ನಿವೇಶನ ಕೊಡಲು ಯಾಕೆ ಆಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕಡಿಮೆ ಇದ್ದಾರೆ ಎಂಬ ಕಾರಣಕ್ಕೆ ಹಕ್ಕುಪತ್ರ ಕೊಡುತ್ತಿಲ್ಲವೇ? ಪಂಚಾಯಿತಿ ಚುನಾವಣೆ ನಡೆಸಲು ಕಾಂಗ್ರೆಸ್ ಸಿದ್ಧವಿಲ್ಲ. ನಮ್ಮದು ಪ್ರೀತಿಯ ರಾಜಕಾರಣ ಎನ್ನುವ ಶಾಸಕರು ಮಹಾಬಲ ರಾವ್‌ಗೆ ಸಹಕಾರ ರತ್ನ ಪ್ರಶಸ್ತಿ ತಪ್ಪಿಸಿರುವುದು ಪ್ರೀತಿಯ ರಾಜಕಾರಣವೆ? ಎಂದು ಪ್ರಶ್ನಿಸಿದರು.

ಬಿಜೆಪಿ ಉಪಾಧ್ಯಕ್ಷ ಜಯಂತ್, ಅರುಣ್ ಶಿವಪುರ, ಕಾರ್ಯದರ್ಶಿ ಭಿಷೇಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪೂರ್ಣಚಂದ್ರ, ಕಿಶೋರ್ ಪೇಜಾವರ್, ರೇವಂತ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಇಸ್ಮಾಯಿಲ್, ಎಚ್.ಆರ್.ರೇಖಾ, ಮುಖಂಡ ಶತಾನಿಕ್, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪದ್ಮಾವತಿ, ಲಲಿತಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.