ADVERTISEMENT

2 ತಿಂಗಳಲ್ಲಿ ಶೃಂಗೇರಿ ಆಸ್ಪತ್ರೆ ಕಟ್ಟಡ

ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಸಿ.ಎಂ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 7:27 IST
Last Updated 28 ನವೆಂಬರ್ 2022, 7:27 IST
ಕೊಪ್ಪದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಕೊಪ್ಪದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.   

ಚಿಕ್ಕಮಗಳೂರು/ ಕೊಪ್ಪ: ‘ಶೃಂಗೇರಿ ಯಲ್ಲಿ 100ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಎರಡು ತಿಂಗಳೊಳಗೆ ನಾನೇ ಬಂದು ಶಂಕುಸ್ಥಾಪನೆ ನೆರವೇರಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಕೊಪ್ಪದಲ್ಲಿ ಭಾನುವಾರ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಶೃಂಗೇರಿ ಆಸ್ಪತ್ರೆಯನ್ನು 100ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ಡರ್ಜೆಗೇರಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಇದ್ದ ಅರಣ್ಯ ತೊಡಕು ನಿವಾರಣೆಯಾಗಿದೆ. ಗುರುತಿಸಿರುವ ಜಾಗ ನೀಡಿ ಪರ್ಯಾಯ ಜಾಗ ಪಡೆಯಲು ಸಮ್ಮತಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ಪತ್ರ ನೀಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಕಾಫಿ ಬೆಳೆಗಾರರು ತೋಟಗಳಲ್ಲಿ ಒತ್ತುವರಿ ಮಾಡಿರುವ ಜಾಗದ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಕಂದಾಯ ಸಚಿವ ದಾರಿ ಹುಡುಕಿದ್ದಾರೆ. ಯೋಜನೆ ರೂಪಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ADVERTISEMENT

ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹರಡದಂತೆ ಔಷಧ ಸಿಂಪಡಣೆಗೆ ₹ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರೋಗದ ನಿವಾರಣೆ ನಿಟ್ಟಿನಲ್ಲಿ ಔಷಧ ಶೋಧಕ್ಕೆ ವಿಜ್ಞಾನಿಗಳ ತಂಡ ಕಾರ್ಯಗತವಾಗಿದೆ. ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇವೆ’ ಎಂದು ಹೇಳಿದರು.

‘ಮುಳ್ಳಯ್ಯನಗಿರಿಯಿಂದ ದತ್ತಪೀಠ ಭಾಗಕ್ಕೆ ‘ರೋಪ್ ವೇ’ ನಿರ್ಮಾಣ ಬಜೆಟ್ ನಲ್ಲಿ ಘೋಷಿಸಲಾಗಿದೆ. ಈ ಕಾಮಗಾರಿ ಶೀಘ್ರದಲ್ಲಿ ಆರಂಭವಾಲಿದೆ’ ಎಂದು ತಿಳಿಸಿದರು.

ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರದಿಂದ ಬಹಳಷ್ಟು ಅನುಕೂಲವಾಗಿದೆ. ರಸ್ತೆ ನಿರ್ಮಾಣ, ಮನೆಗಳಿಗೆ ಕುಡಿಯುವ ನೀರುಯ ಪೂರೈಕೆ, ಬಂದರು ಅಭಿವೃದ್ಧಿ ಮೊದಾಲಾದ ಕಾಮಗಾರಿಗಳು ಆಗಿವೆ ಎಂದು ಹೆಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ 50 ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳು ಮೈಮೇಲೆ ಬರುತ್ತವೆ ಎಂದು ಅವರು ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದರು. ಎಸಿಬಿಯವರು ಈ 50 ಪ್ರಕರಣಗಳಿಗೂ ‘ಬಿ’ ರಿಪೋರ್ಟ್‌ ಹಾಕಿ ಮುಚ್ಚಿ ಹಾಕಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಅನ್ನ ಭಾಗ್ಯಕ್ಕೆ ಕನ್ನ ಹಾಕಿದ್ದಾರೆ. ಯಾರದೋ ದುಡ್ಡಿನಲ್ಲಿ ಸಿದ್ದರಾಮಣ್ಣನ ಜಾತ್ರೆ ನಡೆದಿತ್ತು ಎಂದು ಆಪಾದಿಸಿದರು.

ಶಿಕ್ಷಣ,(ಎಜುಕೇಷನ್‌), ಉದ್ಯೋಗ (ಎಂಪ್ಲಾಯ್‌ಮೆಂಟ್‌) ಮತ್ತು ಎಂಪವರ್‌ಮೆಂಟ್‌ (ಸಬಲೀಕರಣ) ಮೂರು ‘ಇ’ಗಳಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದ್ದೇವೆ. ದುಡಿಮೆ ದೊಡ್ಡಪ್ಪ ಆಗಬೇಕು ಎಂದು ಒತ್ತು ನೀಡಿದ್ದೇನೆ ಎಂದರು.

ಕ್ಷೇತ್ರದ ಪ್ರತಿ ಹಳ್ಳಿಗೆ ಭೇಟಿನೀಡಿ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸ ಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ ಅವರಿಗೆ ಕಿವಿಮಾತು ಹೇಳಿದರು.

2023ರಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.