ADVERTISEMENT

ಬಲ್ಲಾಳರಾಯನ ದುರ್ಗದ ಕೆಳಭಾಗದಲ್ಲಿ ಸ್ಫೋಟದ ಸದ್ದು: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 2:50 IST
Last Updated 17 ಜುಲೈ 2022, 2:50 IST
ಬಲ್ಲಾಳರಾಯನ ದುರ್ಗದ ಕೆಳಭಾಗದಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿ ರಂಜಿತ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು
ಬಲ್ಲಾಳರಾಯನ ದುರ್ಗದ ಕೆಳಭಾಗದಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿ ರಂಜಿತ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು   

ಬೆಳ್ತಂಗಡಿ: ತಾಲ್ಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಬಲ್ಲಾಳರಾಯನ ದುರ್ಗದ ಕೆಳಭಾಗದಲ್ಲಿ ಗುರುವಾರ ರಾತ್ರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಅಲ್ಲದೆ, ಪರಿಸರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಈ ಪ್ರದೇಶಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿ ರಂಜಿತ್, ಅರಣ್ಯ ರಕ್ಷಕ ರಾಜು, ಸಹಾಯಕರಾದ ಗೋಪಾಲ ಹಾಗೂ ಸತೀಶ್ ಶನಿವಾರ ಭೇಟಿ ನೀಡಿ ಸುತ್ತಮುತ್ತಲ ಪರಿಸರಗಳಲ್ಲಿ ಪರಿಶೀಲನೆ ನಡೆಸಿದರು.

ಗುರುವಾರ ರಾತ್ರಿ ಒಂದು ಬಾರಿ ಸದ್ದು ಕೇಳಿ ಬಂದಿದ್ದು ಅದರ ಬಳಿಕ ಯಾವುದೇ ರೀತಿಯ ಸದ್ದು ಕೇಳಿ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪರಿಸರದಲ್ಲಿರುವ ನದಿ, ಹಳ್ಳ, ತೊರೆಗಳಲ್ಲಿ ಯಾವುದೇ ರೀತಿಯ ಬೃಹತ್ ಗಾತ್ರದ ಕಲ್ಲು, ಬಂಡೆಗಳು ಕಂಡುಬಂದಿಲ್ಲ.

ADVERTISEMENT

ಕಲ್ಲು ಜಾರಿರುವ ಸಾಧ್ಯತೆ: ಮಳೆ ನೀರು ರಭಸವಾಗಿ ಹರಿಯುವಾಗ ಬಲ್ಲಾಳ ರಾಯನ ದುರ್ಗದ ಭಾಗದಲ್ಲಿ ಬಂಡೆ ಜಾರಿರುವ ಸಾಧ್ಯತೆ ಇದೆ. ಆದರೆ, ಮೇಲ್ಬಾಗದಿಂದ ಹರಿದು ಬರುವ ನೀರು ಮಾಮೂಲು ಸ್ಥಿತಿಯಲ್ಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ. ಈ ಕಾರಣದಿಂದ ಪರಿಸರದ ಜನ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅರಣ್ಯಾಧಿಕಾರಿಗಳ ತಂಡ ತಿಳಿಸಿದೆ.

ಪುನರ್ವಸತಿಗೆ ಸಿದ್ಧ: ಕುದುರೆಮುಖ ರಾಷ್ಟ್ರೀಯ ಉದ್ಯಾನ ಅಂಚಿನಲ್ಲಿ ಹಾಗೂ ಅರಣ್ಯ ಇಲಾಖೆಯ ವನ್ಯಜೀವಿ ವಲಯದ ಸಮೀಪ 16 ಕುಟುಂಬಗಳು ವಾಸಿಸುತ್ತಿದ್ದು, ಅವರಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸುವ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಅದು ಇನ್ನು ಅಂತಿಮ ಹಂತ ತಲುಪಿಲ್ಲ. ಸರ್ಕಾರದಿಂದ ಪರಿಹಾರವನ್ನು ಒದಗಿಸಿ, ಪುನರ್ವಸತಿ ಕಲ್ಪಿಸಿದರೆ ಇಲ್ಲಿಂದ ತೆರಳಲು ಸಿದ್ಧವಿರುವುದಾಗಿ ಕುಟುಂಬಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.