ಚಿಕ್ಕಮಗಳೂರು:ಜನರು ದುಬಾರಿ ಬಡ್ಡಿಯ ಕೈ ಸಾಲ ಪಡೆಯಬಾರದು. ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಸಲಹೆ ನೀಡಿದರು.
ನಗರದ ಕೆನರಾ ಬ್ಯಾಂಕ್ ವಿಭಾಗೀಯ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೆನರಾ ಬ್ಯಾಂಕಿನ 114ನೇ ಸಂಸ್ಥಾಪನ ದಿನಾಚರಣೆ ಹಾಗೂ ಗೃಹ ಸಾಲ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬ್ಯಾಂಕ್ ಅಥವಾ ಯಾವುದೇ ಉದ್ದಿಮೆಗೆ ಗ್ರಾಹಕರೇ ಜೀವಾಳ. ಗ್ರಾಮೀಣ ಪ್ರದೇಶದ ಬಹುತೇಕ ಜನರು ಬ್ಯಾಂಕಿನಲ್ಲಿ ವ್ಯವಹರಿಸುವುದು ಕಡಿಮೆ. ಕೈ ಸಾಲಗಳಿಗೆ ಹೆಚ್ಚು ಮುಗಿ ಬೀಳುತ್ತಾರೆ. ಅಧಿಕ ಬಡ್ಡಿ ಕಟ್ಟಲಾಗದೇ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.
ರಾಜ್ಯದಾಧ್ಯಂತ ಕೆನರಾ ಬ್ಯಾಂಕ್ ಹೆಚ್ಚು ಶಾಖೆಗಳನ್ನು ಹೊಂದಿದೆ. ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು. ಬ್ಯಾಂಕುಗಳಲ್ಲಿಯೇ ವ್ಯವಹಾರ ನಡೆಸಬೇಕು ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕೆನರಾ ಬ್ಯಾಂಕಿನ ಎಜಿಎಂ ಉಲ್ಲಾಸ್ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ 33 ಶಾಖೆಗಳನ್ನು ಹೊಂದಿದೆ. ಗೃಹ ಸಾಲ ನಿಡಲು ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಗ್ರಾಹಕರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಉದ್ಯಮಿಗಳಾದ ಡಿ.ಎಚ್.ನಟರಾಜ್, ನರೇಂದ್ರ ಪೈ, ಬಾಲಕೃಷ್ಣ, ಚಿದಾನಂದ, ದಯಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.