ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಬಿದಿರುತಳದ ಸಮೀಪ ಕಾರೊಂದು ಶನಿವಾರ ಬೆಳಿಗ್ಗೆ 3 ಗಂಟೆಗೆ ಪ್ರಪಾತಕ್ಕೆ ಉರುಳಿದ ಪರಿಣಾಮ ಐವರು ಗಾಯಗೊಂಡಿದ್ದಾರೆ.
ತರೀಕೆರೆಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಕಾರು ರಸ್ತೆಯಲ್ಲಿ ಮಂಜುಮುಸುಕಿದ್ದರಿಂದ ದಾರಿ ಕಾಣದೇ ಚಾಲಕನ ನಿಯಂತ್ರಣ ತಪ್ಪಿ, ನೂರೈವತ್ತು ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಅದೇ ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರಿಂದ ಮಾಹಿತಿ ಪಡೆದ ಸ್ಥಳೀಯ ಸಮಾಜಸೇವಕ ಮಹಮ್ಮದ್ ಆರೀಫ್, ಚೆಕ್ಪೋಸ್ಟ್ ಅರಣ್ಯ ಸಿಬ್ಬಂದಿ ಬಸವರಾಜ್ ಬಗಲಿ, ಪೊಲೀಸ್ ಸಿಬ್ಬಂದಿ ಸಚಿನ್ ಅವರ ತಂಡ ಸ್ಥಳಕ್ಕೆ ಧಾವಿಸಿದೆ. ತಕ್ಷಣ ಕಾರಿನಲ್ಲಿದ್ದ ತರೀಕೆರೆಯ ರಾಕೇಶ್, ಸಂತೋಷ್, ಶಿವು, ಅಭಿಜಿತ್, ಹಾಲೇಶ್ ಅವರನ್ನು ಕಾರಿನಿಂದ ಹೊರ ತೆಗೆದು ರಕ್ಷಣೆ ಮಾಡಲಾಗಿದೆ.
ಹಾಲೇಶ್ ಎಂಬುವವರ ಕಾಲು ಮುರಿತಗೊಂಡಿದೆ. ಉಳಿದವರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳಕ್ಕೆ ಬಣಕಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.