ADVERTISEMENT

ಎಚ್ಐವಿ ತಡೆಗೆ ಎಚ್ಚರಿಕೆ ಅಗತ್ಯ: ಮಹೇಂದ್ರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 15:46 IST
Last Updated 5 ಡಿಸೆಂಬರ್ 2024, 15:46 IST
ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆಯನ್ನು ಪ್ರಭಾರ ಪ್ರಾಂಶುಪಾಲೆ ಫರ್ಜಾನ ಫರ್ವೀನ್‌ ಉದ್ಘಾಟಿಸಿದರು
ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆಯನ್ನು ಪ್ರಭಾರ ಪ್ರಾಂಶುಪಾಲೆ ಫರ್ಜಾನ ಫರ್ವೀನ್‌ ಉದ್ಘಾಟಿಸಿದರು   

ಕೊಪ್ಪ: ‘ಲಕ್ಷಾಂತರ ಜನರು ಎಚ್‌ಐವಿ ಸೋಂಕಿನಿಂದ ತೊಂದರೆಗೊಳಗಾಗಿದ್ದಾರೆ. ಯುವ ಜನರು ಏಡ್ಸ್‌ನಿಂದ ರಕ್ಷಣೆ ಪಡೆಯಲು ಜಾಗರೂಕತೆಯಿಂದ ಇರಬೇಕು' ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ಮಹೇಂದ್ರ ಕಿರೀಟಿ ಹೇಳಿದರು.

ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಎಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ತುರ್ತು ಸಮಯದಲ್ಲಿ ರಕ್ತ ಪಡೆಯುವಾಗ ಎಚ್‌ಐವಿ ಪರೀಕ್ಷೆ ಮಾಡಿದ ಬಳಿಕ ರಕ್ತ ಪಡೆಯಬೇಕು' ಎಂದರು.

‘ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೆ ಸೂಕ್ತ ರೀತಿಯಲ್ಲಿ ಹೆರಿಗೆ ಮಾಡಿಸಿ, ಔಷಧ ನೀಡುವ ಮೂಲಕ ತಾಯಿಯಿಂದ ಮಗುವಿಗೆ ಸೋಂಕು ತಗುಲುವುದನ್ನು ತಡೆಯಬಹುದು. ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ, ಚಿಕಿತ್ಸೆ ಮತ್ತು ಉಚಿತವಾಗಿ ಸಮಾಲೋಚನೆ ನಡೆಸಲಾಗುತ್ತದೆ' ಎಂದರು.

ADVERTISEMENT

ತಾಲ್ಲೂಕು ಕಾನೂನು ಸೇವಾ ಸಮಿತಿಯ ಹಿರಿಯ ವಕೀಲ ನಾರಾಯಣಸ್ವಾಮಿ ಮಾತನಾಡಿ, ‘ಎಚ್‌ಐವಿ ಸೋಂಕಿತರು ದಿನ ನಿತ್ಯದ ಬದುಕಿನಲ್ಲಿ ಎದುರಿಸುವ ಕಷ್ಟಗಳು ಮತ್ತು ತಾರತಮ್ಯದ ಕುರಿತು ಮಾತನಾಡಿದರು. ಎಚ್‌ಐವಿ ಸೋಂಕಿತರೊಂದಿಗೆ ಮಾತನಾಡಿದ ಅನುಭವಗಳನ್ನು ಅವರು ಹಂಚಿಕೊಂಡರು. ವಿದ್ಯಾರ್ಥಿಗಳು ಉತ್ತಮ ನಡೆ,ನುಡಿಯಿಂದ ಜೀವನ ಸಾಗಿಸುವಂತೆ ಸಲಹೆ ನೀಡಿದರು.

 ಎಚ್‌ಐವಿ ಸೋಂಕು ತಡೆಯುವ ನಿಟ್ಟನಲ್ಲಿ ಯುವ ಜನತೆಯ ಜವಾಬ್ದಾರಿ ಕುರಿತು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್‌ ಮಾತನಾಡಿದರು. ಪ್ರತಿಯೊಬ್ಬರೂ ಎಚ್‌ಐವಿ ಸೋಂಕಿನ ಬಗ್ಗೆ ತಿಳಿದಿರಬೇಕು. ಸಮುದಾಯದಲ್ಲೂ  ಜಾಗೃತಿ ಮೂಡಿಸಬೇಕು. ಎಚ್ಐವಿ ಸೋಂಕಿತ ವ್ಯಕ್ತಿಗಳಿಗೆ ತೋರುವ ತಾರತಮ್ಯ ಹೋಗಲಾಡಿಸಬೇಕು’ ಎಂದು ತಿಳಿಸಿದರು.

ಕಾಲೇಜು ಪ್ರಭಾರ ಪ್ರಾಂಶುಪಾಲೆ ಫರ್ಜಾನ ಫರ್ವೀನ್‌ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ನಾಗರಾಜ್‌, ನಿರಂಜನ್‌, ಅರುಣ್‌ ಕುಮಾರ್‌, ಸುಭಾಷ್, ಐಸಿಟಿಸಿ ಕೇಂದ್ರದ ಸಮಾಲೋಚಕ ಸಚಿನ್‌, ಪ್ರಯೋಗಾಲಯ ತಂತ್ರಜ್ಞ ವೆಂಕಟೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.