ಕಳಸ: ಇಲ್ಲಿನ ಚಂದ್ರನಾಥ ಸ್ವಾಮಿ ಬಸದಿ ಮತ್ತು ಪದ್ಮಾವತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪಂಚಕಲ್ಯಾಣದಲ್ಲಿ ಬುಧವಾರ ಚಂದ್ರನಾಥ ಮತ್ತು ಪಾರ್ಶ್ವನಾಥ ಸ್ವಾಮಿಯ ಕೇವಲಜ್ಞಾನ ಕಲ್ಯಾಣ ಮತ್ತು ಪ್ರತಿಷ್ಠೆ ನೆರವೇರಿತು.
ಇದಕ್ಕೂ ಮುನ್ನ ಜಿನ ಬಾಲಕರ ನಾಮಕರಣ, ಪಟ್ಟಾಭಿಷೇಕ, ದೀಕ್ಷಾ ಕಲ್ಯಾಣ ನೆರವೇರಿತು. ಜ್ವಾಲಾಮಾಲಿನಿ ಮತ್ತು ಪದ್ಮಾವತಿ ಪ್ರತಿಷ್ಠೆ ಕೂಡ ವಿಧಿವತ್ತಾಗಿ ನಡೆಯಿತು.
ಬುಧವಾರ ಗುಣಭದ್ರ ನಂದಿ ಮತ್ತು ಪ್ರಸಂಗಸಾಗರ್ ಮುನಿಗಳ ನೇತೃತ್ವದಲ್ಲಿ ಕಾರ್ಕಳದ ಲಲಿತಕೀರ್ತಿ ಸ್ವಾಮೀಜಿ, ಹೊಂಬುಜದ ದೇವೇಂದ್ರಕೀರ್ತಿ ಸ್ವಾಮೀಜಿ, ಸೋಂದೆಯ ಭಟ್ಟಾಕಲಂಕ ಸ್ವಾಮೀಜಿ ಉಪಸ್ಥಿತಿಯಲ್ಲಿ ಚಂದ್ರನಾಥ ಹಾಗೂ ಪಾರ್ಶ್ವನಾಥರ ಮೋಕ್ಷ, ಕೇವಲಜ್ಞಾನ ಕಲ್ಯಾಣ ನೆರವೇರಿಸಲಾಯಿತು.
ಜಿನಮಾತೆಯ 16 ಸ್ವಪ್ನಗಳ ವಿಶಿಷ್ಟ ಮಾನಸ್ಥಂಬದ ಮೇಲೆ ನಾಲ್ಕು ದಿಕ್ಕುಗಳಲ್ಲಿ ಚಂದ್ರಪ್ರಭ ತೀರ್ಥಂಕರರ ಪ್ರತಿಷ್ಠಾಪನೆ ನೆರವೇರಿತು. ಆನಂತರ ಎರಡೂ ಬಸದಿಗಳಲ್ಲಿ 108 ಕಳಸಗಳ ಅಭಿಷೇಕ ನೆರವೇರಿಸಲಾಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಡಿ.ವೀರೇಂದ್ರ ಹೆಗ್ಗಡೆ, ಕಳಸದಲ್ಲಿ ನಿರ್ಮಾಣವಾಗಿರುವ ಬಸದಿಗಳ ಶಿಲ್ಪಕಲೆ ಸೊಗಸಾಗಿದೆ ಎಂದರು.
ಭೀಮೇಶ್ವರಜೋಷಿ ಮಾತನಾಡಿ, ಕಳಸದಲ್ಲಿ ಬಾಹುಬಲಿ ಪ್ರತಿಷ್ಠಾಪನೆ ಮಾಡಿ ಕಳಸವನ್ನು ಜೈನಕಾಶಿ ಮಾಡಬೇಕು ಎಂದು ಸಲಹೆ ನೀಡಿದರು.
ಮುನಿರಾಜ ರೆಂಜಾಳ ಮಾತನಾಡಿ, ಜೈನ ಧರ್ಮೀಯರಲ್ಲಿ ಮುನಿಗಳ ಪ್ರವಚನ ಕೇಳುವ, ಧರ್ಮಗ್ರಂಥ ಓದುವ ಸ್ವಾಧ್ಯಾಯ ಭಾವ ಕಡಿಮೆ ಆಗುತ್ತಿದೆ ಎಂದು ವಿಷಾದಿಸಿದರು.
ವೈದ್ಯ ಡಾ.ವಿಶ್ವನಾಥ ಪ್ರಭು, ಕರ್ಣಾಟಕ ಬ್ಯಾಂಕ್ ಅಧಿಕಾರಿ ರಾಮ್, ಬಸದಿಯ ಸ್ಥಳ ದಾನಿ ಬ್ರಹ್ಮಯ್ಯ ಇಂದ್ರರ ಕುಟುಂಬಸ್ಥರು ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.