ನರಸಿಂಹರಾಜಪುರ: ‘ಸರ್ಕಾರ ಸೌಲಭ್ಯಗಳು ಅರ್ಹ ರೈತರಿಗೆ ತಲುಪಿದರೆ ಮಾತ್ರ ಕೃಷಿ ಅಭಿಯಾನಕ್ಕೆ ಹೆಚ್ಚು ಅರ್ಥ ಬರಲಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಗುರುವಾರ 2022–23ನೇ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ಕೃಷಿ ರಥಕ್ಕೆ ಚಾಲನೆ ನೀಡಿ, ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ
ಪಂಚಾಯಿತಿಯಿಂದ ರೈತರಿಗೆ ಸಿಗುವ ಎಲ್ಲಾ ಮಾಹಿತಿಯನ್ನು ಕೃಷಿ ರಥದ ಮೂಲಕ ಹಳ್ಳಿಗೆ ತಲುಪಿಸಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ರಮೇಶ್ ಮಸ್ಕಲೆ ಮಾತನಾಡಿ, ‘ಕೃಷಿ ರಥದ ಮೂಲಕ ಮೂರು ದಿನಗಳ ಕಾಲ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಧ್ವನಿವರ್ಧಕ ಹಾಗೂ ಕರಪತ್ರದ ಮೂಲಕ ಪ್ರಚಾರ ಮಾಡಲಾಗುವುದು. ಈ ರಥದಲ್ಲಿ ಒಬ್ಬರು ಕೃಷಿ ಅಧಿಕಾರಿ ಇರುತ್ತಾರೆ’ ಎಂದರು.
ತಾಲ್ಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ನಿರ್ದೇಶಕ ಎಚ್.ಎನ್.ರವಿಶಂಕರ್, ತಹಶೀಲ್ದಾರ್ ವಿಶ್ವನಾಥ್, ಸಹಾಯಕ ತೋಟಗಾರಿಕೆ ನಿರ್ದೇಶಕ ಪುನೀತ್, ತೋಟಗಾರಿಕೆಯ ಇಲಾಖೆಯ ಅಧಿಕಾರಿ ನವೀನ್, ಬಾಳೆಹೊನ್ನೂರು ಕೃಷಿ ಇಲಾಖೆಯ ಅಧಿಕಾರಿ ಎಸ್.ಬಿ.ಸನಮನಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಮುಖಂಡರಾದ ಕೆ.ಎಂ.ಸುಂದರೇಶ್, ಸಾಜು, ಬೆನ್ನಿ, ರಂಗಪ್ಪ, ಎಚ್.ಎಂ.ಶಿವಣ್ಣ, ಚಿತ್ರಪ್ಪ, ಕೆ.ಎ.ಅಬೂಬಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.