ಮೂಡಿಗೆರೆ: ಕಾಶ್ಮೀರದಲ್ಲಿ ಉಗ್ರರ ದಾಳಿ, ಮಂಗಳೂರಿನ ಸಹಾಸ್ ಶೆಟ್ಟಿ ಹತ್ಯೆ ಪ್ರಕರಣ ಖಂಡಿಸಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ವತಿಯಿಂದ ಕರೆ ನೀಡಿದ್ದ ಬಂದ್, ಮೂಡಿಗೆರೆ ಪಟ್ಟಣವನ್ನು ಹೊರತು ಪಡಿಸಿ ಉಳಿದೆಡೆ ಯಶಸ್ವಿಯಾಯಿತು.
ತಾಲ್ಲೂಕಿನ ಗೋಣಿಬೀಡು, ಜನ್ನಾಪುರ, ಬಣಕಲ್, ಕೊಟ್ಟಿಗೆಹಾರ, ಬಾಳೂರು ಸೇರಿದಂತೆ ಎಲ್ಲಾ ಹೋಬಳಿಗಳು ಹಾಗೂ ಪ್ರಮುಖ ಜಂಕ್ಷನ್ಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ವಾರದ ಹಿಂದೆಷ್ಟೇ ಜಯಕರ್ನಾಟಕ ಸಂಘಟನೆ ವತಿಯಿಂದ ಕಾಶ್ಮೀರದ ದಾಳಿ ಖಂಡಿಸಿ ಮೂಡಿಗೆರೆ ಪಟ್ಟಣ ಬಂದ್ ನಡೆದಿತ್ತು. ಹಾಗಾಗಿ ಸೋಮವಾರದ ಬಂದ್ನಿಂದ ಮೂಡಿಗೆರೆ ಪಟ್ಟಣಕ್ಕೆ ವಿನಾಯಿತಿ ನೀಡಲಾಗಿತ್ತು. ಪಟ್ಟಣದಲ್ಲಿ ವಾಹನ ಸಂಚಾರ, ವ್ಯಾಪಾರ, ವಹಿವಾಟು ಎಂದಿನಂತೆ ಇದ್ದವು. ಗ್ರಾಮೀಣ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ವಹಿವಾಟು ಕಡಿಮೆ ಇತ್ತು.
ಗೋಣಿಬೀಡು ಜನ್ನಾಪುರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಟೊ, ಖಾಸಗಿ ವಾಹನಗಳ ಸಂಚಾರ ಎಂದಿನಂತಿತ್ತು. ಬಣಕಲ್, ಕೊಟ್ಟಿಗೆಹಾರ, ಬಾಳೂರು ಗ್ರಾಮಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಬಣಕಲ್ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯೂ ಬಂದ್ನಿಂದ ರದ್ದಾಗಿತ್ತು. ಮಧ್ಯಾಹ್ನದ ಬಳಿಕ ವಾಹನ ಸಂಚಾರ ನಿಧಾನವಾಗಿ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.