ಚಿಕ್ಕಮಗಳೂರು: ದೇವೀರಮ್ಮ ದೀಪೋತ್ಸವದ ಅಂಗವಾಗಿ ಮಂಗಳವಾರ ದೇವಿಯನ್ನು ಗುಡಿ ತುಂಬಿಸಲಾಯಿತು.
ಗಾಳಿಯ ರೂಪದಲ್ಲಿ ದೇವಿ ಗರ್ಭಗುಡಿ ಪ್ರವೇಶ ಮಾಡುತ್ತಾಳೆ ಎಂಬುದು ಭಕ್ತರ ನಂಬಿಕೆ. ಈ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ನಂತರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿದವು.
ಎರಡು ದಿನ ಬೆಟ್ಟದ ಮೇಲೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸೋಮವಾರ ರಾತ್ರಿ ಬೆಟ್ಟದ ಮೇಲೆ ದೀಪೋತ್ಸವ ನೇರವೇರಿತು. ಮಂಗಳವಾರ ಬೆಳಿಗ್ಗೆ ದೇವಿಯನ್ನು ವಿಶೇಷವಾಗಿ ಅಲಂಕರಿಸಿ ಗರ್ಭಗುಡಿಯ ಮುಂಭಾಗಕ್ಕೆ ಪರದೇ ಹಾಕಲಾಗಿತ್ತು.
ಏಳುಗಿರಿ, ಎಪ್ಪತ್ತುಗಿರಿ, ದೇವಿರಮ್ಮನ ಪಾದಕ್ಕೆ ಉಘೇ ಉಘೇ ಎನ್ನುತ್ತಿದ್ದಂತೆ ದೇವಸ್ಥಾನದ ಗರ್ಭಗುಡಿಗೆ ಹಾಕಲಾಗಿದ್ದ ಪರದೆ ಸರಿಯಿತು. ಗಾಳಿ ರೂಪದಲ್ಲಿ ದೇವಿ ಪ್ರವೇಶವಾಯಿತು ಎಂದು ಭಕ್ತರು ಸಂಭ್ರಮಿಸಿದರು. ಈ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ುಪ ಲೋಕಾಯುಕ್ತ ಕೆ.ಎನ್. ಫಣೀಂದ್ರ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಚ್.ಡಿ. ತಮ್ಮಯ್ಯ, ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಅರಸರ ಮನೆತನದಿಂದ ಬಾಗಿನ ಅರ್ಪಣೆ: ಪ್ರತೀತಿಯಂತೆ ಮೈಸೂರು ಅರಸರ ಮನೆತನದಿಂದ ದೇವಿಗೆ ಮಂಗಳವಾರ ಬಾಗಿನ ಅರ್ಪಿಸಲಾಯಿತು. ಮೈಸೂರು ಸಂಸ್ಥಾನದ ಪರವಾಗಿ ಬಂದಿದ್ದ ಅರಸು ಸಂಘದ ರಾಜ್ಯ ಘಟಕ ಅಧ್ಯಕ್ಷ ದಿನೇಶ್, ಹಣ್ಣು, ಕಾಯಿ, ವಿಳ್ಯೆದೆಲೆ, ಸೀರೆ, ಅರಿಶಿನ-ಕುಂಕುಮ ಅರ್ಪಣೆ ಮಾಡಿ ದೇವಿಯ ದರ್ಶನ ಪಡೆದರು. ನಂತರ ಸಂಜೆ ಬೆಣ್ಣೆ ಬಟ್ಟೆ ಸುಡುವ ಕಾರ್ಯಕ್ರಮ ನೇರವೇರಿತು.
ಹಲವು ಕಾರ್ಯಕ್ರಮ
ದೀಪೋತ್ಸವದ ನಾಲ್ಕನೇ ದಿನವಾದ ಬುಧವಾರ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ದೇವಿಗೆ ಬೆಳಿಗ್ಗೆ 8 ಗಂಟೆಯಿಂದ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಹಾಗಣಪತಿ ಪೂಜೆ ಪುಣ್ಯಾಹ ಅಗ್ನಿಕುಂಡ ಪೂಜೆ ಕಳಸ ಸ್ಥಾಪನೆ ಕುಂಕುಮಾರ್ಚನೆ ನೇರವೇರಲಿದ್ದು ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.