ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಲಕ್ಯಾ ಹೋಬಳಿ ಬೆಳವಾಡಿಯಲ್ಲಿ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಜಾನಪದ ಕಲೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖಂಡ ಬಿ.ಎಸ್ ಬಸವರಾಜ್, ‘ಮನುಷ್ಯನನ್ನು ಹುಟ್ಟಿನಿಂದ ಸಾಯುವ ತನಕ ಜನಪದ ಸಂಸ್ಕೃತಿ ಹಂತ ಹಂತವಾಗಿ ನಾಗರಿಕತೆ ಕಡೆಗೆ ಕೊಂಡೊಯ್ಯುತ್ತದೆ’ ಎಂದರು.
ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ‘ಭಾರತೀಯ ಸಂಸ್ಕೃತಿ ಪ್ರಪಂಚದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಎಲ್ಲಾ ದೇಶದವರು ನಮ್ಮ ಸಂಸ್ಕೃತಿಯನ್ನು ಗೌರವಿಸಲು ಮೂಲ ಕಾರಣ ನಮ್ಮ ಜನ ಜೀವನ, ಆಚಾರ ವಿಚಾರಗಳೇ ಆಗಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವುದು ನಮ್ಮ ಗ್ರಾಮೀಣ ಭಾರತದ ಜಾನಪದ ಸಂಸ್ಕೃತಿ’ ಎಂದರು.
ಅರ್ಥವಿಲ್ಲದ ಪಾಶ್ಚತ್ಯ ಸಂಸ್ಕೃತಿಯ ಸಂಗೀತ, ಸಾಹಿತ್ಯ, ಕಲೆ, ನೃತ್ಯಗಳಿಗೆ ಯುವ ಸಮೂಹ ಮರುಳಾಗಬಾರದು ಎಂದು ಕಿವಿಮಾತು ಹೇಳಿದರು.
ಮುಖಂಡ ರವೀಂದ್ರ ಬೆಳವಾಡಿ ಮಾತನಾಡಿ, ‘ಶಿವರಾತ್ರಿ ಹಬ್ಬದ ಪ್ರಯುಕ್ತ ಎಲ್ಲಾ ಜಾನಪದ ಕಲಾವಿದರನ್ನು ಒಂದೆಡೆ ಸೇರಿಸಿ ಶಿವನಿಗೆ ಇಷ್ಟವಾಗುವ ವಿವಿಧ ಜಾನಪದ ಕಲೆಗಳ ಮೂಲಕ ಶಿವನಿಗೆ ಅರ್ಪಣೆ ಮಾಡಿರುವುದು ಶ್ಲಾಘನೀಯ’ ಎಂದರು.
ಪರಿಷತ್ತಿನ ಮುಖಂಡ ಬಿ.ಪಿ.ಪರಮೇಶ್ವರಪ್ಪ, ಬೆಳವಾಡಿ ಪ್ರಕಾಶ್, ಶಂಕ್ರೇಗೌಡ, ಶಿಕ್ಷಕ ಅನ್ಸರ್, ಶಂಕರಯ್ಯ, ಬಾಗದೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.