ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕ್ರೀಡೆಗೆ ಜನರಲ್ಲಿ ಆಸಕ್ತಿ ಇದ್ದರೂ, ಕ್ರೀಡಾಂಗಣ ಕೊರತೆ ಎದ್ದು ಕಾಣಿಸುತ್ತಿದೆ. ಕೆಲವು ಕಾಮಗಾರಿ ಅರ್ಧಕ್ಕೆ ನಿಂತಿದ್ದರೆ, ಹಲವು ಕ್ರೀಡಾಂಗಣಗಳು ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ. ಇನ್ನೂ ಕೆಲವೆಡೆ ನಿರ್ಮಾಣಕ್ಕೆ ಕಾದಿವೆ.
ಜಿಲ್ಲಾ ಕೇಂದ್ರದಲ್ಲಿ ಮೂರು ಹೊರಾಂಗಣ ಕ್ರೀಡಾಂಗಣ, ಒಂದು ಒಳಾಂಗಣ ಕ್ರೀಡಾಂಗಣ ಇದೆ. ಶತಮಾನೋತ್ಸವ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 2020–21ರಲ್ಲಿ ₹6.74 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯೂ ಆರಂಭವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.
ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು, ಜಲ್ಲಿ ಸುರಿದು ಬಿಟ್ಟು ಹೋಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಉಳಿಕೆ ಕಾಮಗಾರಿಯನ್ನು ಈ ಮೊತ್ತದಲ್ಲಿ ಪೂರ್ಣಗೊಳಿಸಲು ಹೊಸದಾಗಿ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ. ಮತ್ತೆ ಕಾಮಗಾರಿ ಆರಂಭಿಸಲು ಹೆಚ್ಚುವರಿಯಾಗಿ ₹1.16 ಕೋಟಿ ಅನುದಾನದ ಅಗತ್ಯವಿದೆ.
ಈ ಹಣ ಬಿಡುಗಡೆಯಾದರೆ ಕಾಮಗಾರಿ ಆರಂಭವಾಗಲಿದೆ. ಕೆಪಿಟಿಸಿಎಲ್ನ ಸಿಎಸ್ಆರ್ ಅನುದಾನದಲ್ಲಿ ₹5 ಕೋಟಿ ಮೊತ್ತ ಕಾಮಗಾರಿ ಆರಂಭಿಸಲು ಯೋಜನೆ ರೂಪುಗೊಂಡಿದೆ. ಈ ಕಾಮಗಾರಿಯೂ ಪೂರ್ಣಗೊಂಡರೆ ಕ್ರೀಡಾಂಗಣ ಹೊಸ ರೂಪ ಪಡೆಯಲಿದೆ.
ಕಾಮಗಾರಿಗಳು ಆರಂಭವಾಗಲು ಇನ್ನಷ್ಟು ದಿನ ಬೇಕಿದ್ದು, ಅಲ್ಲಿಯ ತನಕ ಚಿಕ್ಕಮಗಳೂರಿನ ಜನ ಕಾಯಬೇಕಿದೆ. ಸದ್ಯಕ್ಕೆ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನವೇ ಕ್ರೀಡಾಪಟುಗಳಿಗೆ ಆಸರೆಯಾಗಿದೆ.
ಇನ್ನು ತಾಲ್ಲೂಕು ಕೇಂದ್ರಗಳ ಪೈಕಿ ಕಡೂರು, ಎನ್.ಆರ್.ಪುರ, ಮೂಡಿಗೆರೆಯಲ್ಲಿ ಮಾತ್ರ ತಾಲ್ಲೂಕು ಕ್ರೀಡಾಂಗಣಗಳಿವೆ. ಉಳಿದೆಡೆ ನಿರ್ಮಾಣ ಆಗಬೇಕಿದೆ.
ಪೂರಕ ಮಾಹಿತಿ: ಕೆ.ಎನ್. ರಾಘವೇಂದ್ರ, ಬಾಲು ಮಚ್ಚೇರಿ, ಜೆ.ಒ.ಉಮೇಶ್ಕುಮಾರ್, ಕೆ.ವಿ. ನಾಗರಾಜ, ನಾಗರಾಜ, ರವಿಕುಮಾರ್ ಶೆಟ್ಟಿಹಡ್ಲು, ರವಿ ಕೆಳಂಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.