ಮೂಡಿಗೆರೆ: ‘ಅಡಿಕೆ ತೋಟಗಳಲ್ಲಿ ವ್ಯಾಪಿಸುತ್ತಿರುವ ಎಲೆಚುಕ್ಕಿ ರೋಗವನ್ನು ತೇವಾಂಶ ನಿರ್ವಹಣೆ ಮತ್ತು ಸೂಕ್ತ ಶಿಲಿಂದ್ರ ನಾಶಕದಿಂದ ನಿಯಂತ್ರಿಸಲು ಸಾಧ್ಯ’ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಆರ್. ಗಿರೀಶ್ ಹೇಳಿದರು.
ತಾಲ್ಲೂಕಿನ ಭಾರತಿಬೈಲ್ ಗ್ರಾಮದಲ್ಲಿ ಶುಕ್ರವಾರ ಅಡಿಕೆ ಎಲೆಚುಕ್ಕಿರೋಗ ನಿಯಂತ್ರಣ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.
‘ಅಡಿಕೆಗೆ ಎರಡು ವರ್ಷಗಳಿಂದ ಎಲೆ ಚುಕ್ಕೆರೋಗ ಬಾಧಿಸುತ್ತಿದ್ದು ಮಲೆನಾಡಿನಲ್ಲಿ ಸಮಾರು 2,200 ಹೆಕ್ಟೆರ್ ಪ್ರದೇಶದಲ್ಲಿ ರೋಗ ಕಾಣಿಸಿಕೊಂಡಿದೆ. ರೈತರು ರೋಗ ನಿಯಂತ್ರಿಸಲು ಸಮಗ್ರ ನಿರ್ವಹಣೆ ಹಾಗೂ ಸೂಕ್ತವಾದ ಶಿಲೀಂಧ್ರನಾಶಕ ಸಿಂಪಡಿಸಬೇಕು. ಮುಂಗಾರು ಪ್ರಾರಂಭದಲ್ಲಿ ರೋಗ ಬಾಧಿತ ಗರಿಗಳನ್ನು ಕಿತ್ತು ಸುಟ್ಟುಹಾಕುವುದು, ತೋಟದಲ್ಲಿ ಹೆಚ್ಚು ತೇವಾಂಶ ನಿಲ್ಲದಂತೆ ಬಸಿಗಾಲುವೆಗಳನ್ನು ನಿರ್ಮಿಸುವುದು, ಸೂಕ್ತವಾದ ಶಿಲೀಂಧ್ರನಾಶಗಳಾದ ಹೆಕ್ಸಾಕೋನಾಝಾಲ್ 1 ಮಿ.ಲೀ ಅಥವಾ ಪ್ರೊಪಿಕೋನಾಝಾಲ್ 1 ಮಿ.ಲೀ ಅಥವಾ ಕಾರ್ಬಂಡೈಜಿಮ್ ಹಾಗೂ ಮ್ಯಾಂಕೋಜೆಬ್ 2 ಗ್ರಾಂ. ಪ್ರತಿ ಲೀಟರ್ ನೀರಿನೊಂದಿಗೆ ಮಿಶ್ರಿಸಿ ಯಾವುದಾದರೊಂದು ಶಿಲೀಂಧ್ರನಾಶಕವನ್ನು ಸಿಂಪಡಿಸಬಹುದು. 20 ದಿವಸಗಳ ಅಂತರದಲ್ಲಿ ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.