ADVERTISEMENT

ಅಡ್ಡಾದಿಡ್ಡಿ ವಾಹನಗಳು: ಕ್ರಮಕ್ಕೆ ಆಗ್ರಹ

ಕಡೂರು ತಾಲ್ಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರ ಪರದಾಟ

ಬಾಲು ಮಚ್ಚೇರಿ
Published 8 ಡಿಸೆಂಬರ್ 2018, 16:23 IST
Last Updated 8 ಡಿಸೆಂಬರ್ 2018, 16:23 IST
ತಾಲ್ಲೂಕಿ ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳು
ತಾಲ್ಲೂಕಿ ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳು   

ಕಡೂರು: ತಾಲ್ಲೂಕು ಕಚೇರಿ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ತಾಲ್ಲೂಕು ಕಚೇರಿ ಆವರಣದಲ್ಲಿ ಉಪ ನೋಂದಣಾಧಿಕಾರಿ ಕಚೇರಿ, ಆಹಾರ ಶಾಖೆ, ಚುನಾವಣಾ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಪಹಣಿ ಕೇಂದ್ರ, ಕಸಬಾ ನಾಡ ಕಚೇರಿ, ಜಿಲ್ಲಾ ಉಪ ಕಾರಗೃಹಗಳು ಸಹ ಈ ಆವರಣದಲ್ಲಿಯೇ ಇವೆ. ಒಂದೆರಡು ಸ್ಟಾಂಪ್ ವೆಂಡರ್ ಕಚೇರಿಗಳು ಇಲ್ಲಿಯೇ ಇವೆ.

ನಾನಾ ಕೆಲಸಗಳಿಗಾಗಿ ಇಲ್ಲಿಗೆ ಬರುವ ಸಾರ್ವಜನಿಕರು ಕಾರು, ಬೈಕ್ ಗಳಲ್ಲಿ ಬರುತ್ತಾರೆ. ಈ ಆವರಣ ದಲ್ಲಿ ಅಡ್ಡಾದಿಡ್ಡಿಯಾಗಿ ತಮ್ಮ ವಾಹನ ಗಳನ್ನು ನಿಲ್ಲಿಸುತ್ತಾರೆ. ಇದರಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರು ಸರಾಗವಾಗಿ ಓಡಾಡಲು ತೊಂದರೆಯಾಗಿದೆ.

ಈ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ವಾಹನಗಳನ್ನು ನಿಲ್ಲಿಸಲು ಪರದಾಡುವಂತಾಗಿದೆ. ಪಹಣಿ ತೆಗೆದುಕೊಳ್ಳಲು ಬರುವವರು ಸರತಿ ನಿಲ್ಲಲೂ ಈ ವಾಹನಗಳಿಂದ ತೊಂದರೆಯಾಗಿದೆ. ಈ ಹಿಂದೆ ಹಿಂದೆ ತಹಶೀಲ್ದಾರ್ ಆಗಿದ್ದ ಚಿನ್ನರಾಜು ಅವರು ಈ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಪಾರ್ಕಿಂಗ್ ಲಾಟ್ ಮಾಡಲು ಮುಂದಾಗಿ ಕಲ್ಲು ಕಂಬಗಳನ್ನು ನೆಡಿಸಿ ತಂತಿ ಬೇಲಿ ಹಾಕಿಸಿ ದ್ವಿಚಕ್ರ ವಾಹನಗಳಿಗೆ ಪಾರ್ಕ್ ಮಾಡಲು ವ್ಯವಸ್ಥೆ ಮಾಡಿದ್ದರು. ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಕೆಲ ದಿನಗಳ ನಂತರ ಮತ್ತೆ ಯಥಾಸ್ಥಿತಿಗೆ ಮರಳಿತು.

ADVERTISEMENT

ತಾಲ್ಲೂಕು ಕಚೇರಿ ಆವರಣಕ್ಕೆ ಮೂರು ಗೇಟ್ ಗಳಿವೆ. ಮೂರೂ ಕಡೆಯಿಂದ ಬರುವ ಸಾರ್ವಜನಿಕರು ಎಲ್ಲೆಂದರಲ್ಲಿ ತಮ್ಮ ವಾಹನ ನಿಲ್ಲಿಸುವುದರಿಂದ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗುವ ವೃದ್ಧರ ಪಾಡು ಬಹಳ ಕಷ್ಟಕರವಾಗಿದೆ. ಇಷ್ಟೇ ಅಲ್ಲದೆ ರಾತ್ರಿ ವೇಳೆ ಅನಧಿಕೃತ ವಾಹನಗಳು ಸಹ ಈ ಆವರಣದಲ್ಲಿ ನಿಲ್ಲುತ್ತವೆ.

ಈ ಆವರಣದಲ್ಲಿ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿ. ಶುಲ್ಕ ವಸೂಲಿ ಮಾಡಬಹುದು. ಕನಿಷ್ಟ ನಿತ್ಯ 300ಕ್ಕೂ ಹೆಚ್ಚು ವಾಹನಗಳು ಇಲ್ಲಿ ನಿಲ್ಲುತ್ತವೆ. ಸಂಗ್ರಹವಾಗುವ ಶುಲ್ಕವನ್ನು ಕಚೇರಿ ಆವರಣದ ಸ್ವಚ್ಛತೆಗಾಗಿಯೇ ಬಳಸಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.