
ಬೆಮ್ಮನೆ (ನರಸಿಂಹರಾಜಪುರ): ಕಾಫಿ ಬೆಳೆಗೆ ಶೇ 70ರಷ್ಟು ಪರಾಗ ಸ್ಪರ್ಶವು ಜೇನು ಹುಳದಿಂದಲೇ ಆಗಲಿದೆ ಎಂದು ಎಸ್.ಎಂ.ಸೇಹಗಲ್ ಫೌಂಡೇಷನ್ ಸಂಸ್ಥೆಯ ಪೀಲ್ಡ್ ಆಫೀಸರ್ ಸುಧೀರ್ ಹೇಳಿದರು.
ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ಸೋಮವಾರ ಎಸ್.ಎಂ.ಸೇಹಗಲ್ ಸಂಸ್ಥೆಯಿಂದ ಸಣ್ಣ ಕಾಫಿ ಬೆಳೆಗಾರರಿಗೆ, ಕಾಫಿ ಗಿಡ ಕಸಿ ಹಾಗೂ ಗೊಬ್ಬರ ನಿರ್ವಹಣೆ ಬಗ್ಗೆ ತರಬೇತಿ ನೀಡಿದರು.
ಕಾಫಿ ಬೆಳೆಯಲ್ಲಿ ಮಣ್ಣು, ನೀರು, ವಾತಾವರಣ, ಜೀವ ವೈವಿಧ್ಯ ಬಹಳ ಮುಖ್ಯವಾಗಿದೆ. ರೈತರು ಆಗಾಗ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಆ ಆಧಾರದ ಮೇಲೆ ಗೊಬ್ಬರ ನೀಡಬೇಕು. ರೋಬಸ್ಟ್ ಕಾಫಿ ಗಿಡದಲ್ಲಿ ಜೇನು ಹುಳದ ಪಾತ್ರ ಬಹಳ ಮುಖ್ಯವಾಗಿದೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಸಿ ಸ್ವಾಭಾವಿಕ ಕ್ರಿಯೆಯನ್ನು ನಾಶ ಮಾಡಬಾರದು. ಇದರಿಂದ ಕಾಫಿ ಬೆಳೆಯ ಇಳುವರಿ ಮತ್ತು ಗುಣಮಟ್ಟ ಎರಡೂ ಕುಂಠಿತಗೊಳ್ಳುತ್ತದೆ ಎಂದರು.
ಕೊಪ್ಪದ ಸಂಪನ್ಮೂಲ ವ್ಯಕ್ತಿ, ಜೇರ್ಮೀಸ್ ಡಿಸೋಜ ಮಾಹಿತಿ ನೀಡಿ, ‘ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಬಾರದು. ಯಾವುದೇ ಸಸ್ಯ ಬೆಳವಣಿಗೆ ಆಗಬೇಕಾದರೆ ಸರಿಯಾದ ಪೋಷಕಾಂಶ ಅಗತ್ಯವಾಗಿದೆ. ಕಾಫಿ ಗಿಡಗಳಿಗೆ ಬೆಳಕು, ಗಾಳಿ ಸಮರ್ಪಕವಾಗಿ ಸಿಗುವಂತೆ ಮಾಡಲು ಕಸಿ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಮಲ್ಚಿಂಗ್ ಮತ್ತು ಕಾಂಪೋಸ್ಟಿಂಗ್ ಮೂಲಕ ಕತ್ತರಿಸಿದ ಕಾಫಿ ಗಿಡದ ವಸ್ತುಗಳನ್ನು ಮರುಬಳಕೆ ಬಗ್ಗೆ ಮಾಡುವ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಯಿತು.
ಎಸ್.ಎಂ. ಸೇಹಗಲ್ ಫೌಂಡೇಷನ್ನ ಶಿವಾನಂದ್, ಸುಹಾಸ್ ಇದ್ದರು. ಬೆಮ್ಮನೆಯ ಸಣ್ಣ ಕಾಫಿ ಬೆಳೆಗಾರರು ತರಬೇತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.