ಚಿಕ್ಕಮಗಳೂರು: ‘ಮತ ಕಳವು ಆಗುವುದಿದ್ದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯ ಅಳಿಯ ಗೆಲ್ಲುತ್ತಿರಲಿಲ್ಲ. ಚುನಾವಣಾ ಅಕ್ರಮ ಸಾಬೀತಾಗಿರುವ ಡಿಎನ್ಎ ಇರುವುದು ಕಾಂಗ್ರೆಸ್ ಪಕ್ಷಕ್ಕೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
‘ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿರುವ 94 ಚುನಾವಣೆಗಳಲ್ಲಿ ಬೆರಳೆಣಿಕೆಯಷ್ಟು ಗೆದ್ದಿವೆ. ಕಾಂಗ್ರೆಸ್ ಗೆದ್ದರೆ ಪ್ರಜಾಪ್ರಭುತ್ವದ ಗೆಲುವು ಎನ್ನುವುದು, ಸೋತರೆ ಮತ ಕಳುವು ಎನ್ನುವುದು. ಇದು ಹುಚ್ಚಾಸ್ಪತ್ರೆ ರೋಗಿಯ ಮನಸ್ಥಿತಿ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ರಾಹುಲ್ ಗಾಂಧಿ ದಾರಿ ತಪ್ಪಿದ ನಾಯಕ. ಮೂರ್ಖ ನಾಯಕನನ್ನು ಮೂಢರಂತೆ ಆ ಪಕ್ಷದ ಇತರ ನಾಯಕರು ಹಿಂಬಾಲಿಸುತ್ತಿದ್ದಾರೆ. ಅವರು ಕಾಗೆ ಬಿಳಿ ಇದೆ ಎಂದರೆ ಹೌದು ಎಂದು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಗೋಣಾಡಿಸುತ್ತಿದ್ದಾರೆ. ಇದು ಬುದ್ಧಿವಂತಿಕೆಯ ಲಕ್ಷಣವಲ್ಲ, ಬುದ್ಧಿವಂತಿಕೆಯನ್ನು ಒತ್ತೆ ಇಟ್ಟವರ ಲಕ್ಷಣ’ ಎಂದರು.
‘ಸೈನಿಕರ ವಿರುದ್ಧ ಮಾತನಾಡಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈಗ ಈ ಪ್ರಕರಣದಲ್ಲಿ ಮತ್ತೊಮ್ಮೆ ಛೀಮಾರಿ ಹಾಕಿಸಿಕೊಳ್ಳುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.