ಚಿಕ್ಕಮಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಗೆ ನಗರದ ಜೆಎಂಎಫ್ಸಿ ಮತ್ತು ಎರಡನೆ ಹೆಚ್ಚುವರಿ ಸಿವಿಲ್ ಕೋರ್ಟ್ ತಡೆ ನೀಡಿದ್ದು, ಮತದಾನ ದಿನದ (ಇದೇ13) ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಳಿಸಿ ಮತಗಟ್ಟೆಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಎಲ್.ಪ್ರಸನ್ನಕುಮಾರ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಸನ್ನಕುಮಾರ್ ಅವರು, ‘ಕೋರ್ಟ್ ಆದೇಶದ ಮೇರೆಗೆ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಮತದಾನ ನಡೆದಿದೆ. ಮತ ಎಣಿಕೆ ಪ್ರಕ್ರಿಯೆ ನಡೆಯಬೇಕಿತ್ತು’ ಎಂದು ತಿಳಿಸಿದರು.
‘ಮತದಾನ ಮತ್ತು ಎಣಿಕೆ ಪ್ರಕ್ರಿಯೆ ಒಂದೇ ದಿನ ಇತ್ತು. ಸಂಜೆ 4.30ರ ನಂತರ ಎಣಿಕೆ ನಡೆಯಬೇಕಿತ್ತು. ಮತಗಟ್ಟೆಗಳನ್ನು ಮೊಹರು ಮಾಡಿ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ’ ಎಂದು ತಿಳಿಸಿದರು.
ನಾಮಪತ್ರ ತಿರಸ್ಕೃತವಾಗಿದ್ದ ನ್ಯಾಯಾಂಗದ ಟಿ.ಸುರೇಶ್ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದರು. ನಾಮಪತ್ರ ತಿರಸ್ಕೃತ ಮತ್ತು ಅಂಗೀಕೃತ ಎರಡೂ ಪಟ್ಟಿಯಲ್ಲೂ ಹೆಸರು ಪ್ರಕಟಿಸಲಾಗಿದೆ ಎಂದು ಆರೋಪಿಸಿದ್ದರು.
ನಗರದ ಬಸವನಹಳ್ಳಿ ಬಡಾವಣೆಯ ಬಾಲಿಕಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ಮತದಾನ ಪ್ರಕ್ರಿಯೆ ನಡೆದಿದೆ. ಚುನಾವಣೆ ಅರ್ಧಕ್ಕೆ ಸ್ಥಗಿತವಾದ ನಿಮಿತ್ತ ಕಾಲೇಜು ಅವರಣದಲ್ಲಿ ಗೊಂದಲದ ವಾತಾವರಣ ಇತ್ತು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್.ಶ್ರುತಿ, ಪಿಎಸ್ಐ ರಕ್ಷಿತ್, ಓಮನಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.