ADVERTISEMENT

ಎನ್‌.ಆರ್‌.ಪುರ ಕೋರ್ಟ್‌: ಸಿಪಿಐ ಮಾವೋವಾದಿ ಮುಖಂಡ ಬಿಜಿಕೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 10:23 IST
Last Updated 24 ಫೆಬ್ರುವರಿ 2022, 10:23 IST
ಎನ್‌.ಆರ್‌.‍ ಪುರದ ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಗುರುವಾರ ಹಾಜರುಪಡಿಸಿದರು.
ಎನ್‌.ಆರ್‌.‍ ಪುರದ ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಗುರುವಾರ ಹಾಜರುಪಡಿಸಿದರು.   

ಚಿಕ್ಕಮಗಳೂರು: ಸಿಪಿಐ (ಮಾವೋವಾದಿ) ಮುಖಂಡ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಎನ್‌.ಆರ್‌.‍ ಪುರದ ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಗುರುವಾರ ಹಾಜರುಪಡಿಸಿದರು.

ಪೊಲೀಸ್‌ ಭದ್ರತೆಯಲ್ಲಿ ಕೋರ್ಟ್‌ಗೆ ಕರೆತರಲಾಯಿತು. ನ್ಯಾಯಾಧೀಶರಾದ ಕೆ. ಹರೀಶ್‌ ಅವರು ವಿಚಾರಣೆ ನಡೆಸಿದರು.

ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಣಾಕ್ಷಿ ಸುದ್ದಿಗಾರರೊಂದಿಗೆ ಮಾತನಾಡಿ, ನಕ್ಸಲೈಟ್‌ ವಿಚಾರದಲ್ಲಿ ಬಿ.ಜಿ. ಕೃಷ್ಣಮೂರ್ತಿ ಪರಾರಿಯಾಗಿದ್ದರು. ಕೇರಳ ಪೊಲೀಸರು ಅವರನ್ನು ಈಚೆಗೆ ಬಂಧಿಸಿದ್ದರು. ‘ಬಾಡಿ ವಾರೆಂಟ್‌’ ಮೂಲಕ ಎನ್‌.ಆರ್‌.ಪುರ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಅವರ ವಿರುದ್ಧ ಶೃಂಗೇರಿ ಕೋರ್ಟ್‌ನಲ್ಲಿ 29 ಪ್ರಕರಣಗಳು ಇವೆ. ಶೃಂಗೇರಿ ಕೋರ್ಟ್‌ ನ್ಯಾಯಾಧೀಶರು ರಜೆ ಇದ್ದಾರೆ. ಹೀಗಾಗಿ, ಎನ್‌.ಆರ್‌.ಪುರ ಕೋರ್ಟ್‌ನಲ್ಲಿ ಹಾಜರುಪಡಿಸಲಾಗಿದೆ ಎಂದರು.

ಹೊರ ರಾಜ್ಯ, ಜಿಲ್ಲೆಗಳಲ್ಲಿ ಪ್ರಕರಣಗಳು ಇವೆ. ಕೃಷ್ಣಮೂರ್ತಿ ವಕೀಲ ವೃತ್ತಿ ಮಾಡಿದ್ದರಂತೆ. ಕೋರ್ಟ್‌ನಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಬಿಜಿಕೆ ಎಂದು ಕರೆಯುವ ಬಿ.ಜಿ. ಕೃಷ್ಣಮೂರ್ತಿ ಅವರು ಶೃಂಗೇರಿ ತಾಲ್ಲೂಕಿನ ಬುಕ್ಕಡಿಬೈಲಿನ ನೆಮ್ಮಾರು ಎಸ್ಟೇಟ್‌ನವರು. ಬಿ.ಎ, ಎಲ್‌ಎಲ್‌ಬಿ ವಿದ್ಯಾಭ್ಯಾಸ ಮಾಡಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟ ಸಹಿತ ವಿವಿಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್‌ ಮುಖಂಡ ಸಾಕೇತ್‌ ರಾಜನ್‌ ಹತ್ಯೆ ನಂತರ ಕೃಷ್ಣಮೂರ್ತಿ ಸಂಘಟನಾ ಕಾರ್ಯದ ನೇತೃತ್ವ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.