ADVERTISEMENT

ನಾನು ಕೊತ್ವಾಲ ರಾಮಚಂದ್ರನ ಶಿಷ್ಯನಲ್ಲ, ಗೂಂಡಾಗಿರಿ ಮಾಡಿಲ್ಲ: ಸಿ.ಟಿ.ರವಿ

ಕಾಂಗ್ರೆಸ್‌ನವರು ಆರ್‌.ವಿ.ದೇವರಾಜ್‌, ಹರಿಪ್ರಸಾದ್‌ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 11:10 IST
Last Updated 5 ಡಿಸೆಂಬರ್ 2022, 11:10 IST
ಸಿ.ಟಿ ರವಿ (ಪ್ರಜಾವಾಣಿ ಚಿತ್ರ)
ಸಿ.ಟಿ ರವಿ (ಪ್ರಜಾವಾಣಿ ಚಿತ್ರ)   

ಚಿಕ್ಕಮಗಳೂರು: ‘ಎಲ್ಲ ರೌಡಿಶೀಟರ್‌ಗಳೂ ರೌಡಿಗಳಲ್ಲ ಎಂದು ಹೇಳಿದ್ದೆ. ರಾಜಕೀಯ ಕಾರಣಕ್ಕೆ ಸಹಸ್ರಾರು ಜನರನ್ನು ರೌಡಿಶೀಟರ್‌ಗೆ ಸೇರಿಸಿದ್ದರ ಕುರಿತು ಮಾತನಾಡಿದ್ದೆ. ನಿಜವಾದ ರೌಡಿಗಳಿಗೆ ನಾನು ‘ಕ್ಲೀನ್‌ ಚಿಟ್‌’ ಕೊಟ್ಟಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ನವರು ರೌಡಿಗಳನ್ನು ಬೆಳೆಸಿದ್ದಾರೆ. ಆ ಪಕ್ಷದವರು ನಾನು ಹೇಳಿದ ಪ್ರತಿ ಅಂಶ ಹಾಗೂ ಅವರದೇ ಪಕ್ಷದ ಆರ್‌.ವಿ.ದೇವರಾಜ್‌, ಹರಿಪ್ರಸಾದ್‌ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು’ ಎಂದು ಕುಟುಕಿದರು.

‘ನಾನು ಕೊತ್ವಾಲ ರಾಮಚಂದ್ರನ ಶಿಷ್ಯನಲ್ಲ. ಗೂಂಡಾಗಿರಿ ಮಾಡಿಲ್ಲ. ವೈಯಕ್ತಿಕ ಕಾರಣದ ಒಂದೂ ಪ್ರಕರಣ ನನ್ನ ವಿರುದ್ಧ ಇಲ್ಲ.ಇದ್ದವು ಸಾರ್ವಜನಿಕ ಹೋರಾಟದವು, ರೌಡಿಶೀಟರ್‌ಗೆ ಸೇರಿಸಿದ್ದರು. ಅದಕ್ಕೆ ನನ್ನನ್ನು ಉದಾಹರಣೆಯಾಗಿ ಕೊಟ್ಟಿದ್ದೆ. ಗೂಂಡಾಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಒಪ್ಪಲ್ಲ’ ಎಂದು ಉತ್ತರಿಸಿದರು.

ADVERTISEMENT

‘ಟೀಕಾಕಾರರು ನನ್ನನ್ನು ಕುಡುಕ ಎಂದು ಹೇಳಿದ್ದರು. ಸಾರ್ವಜನಿಕವಾಗಿ ಕುಡಿದ, ಅಸಭ್ಯವಾಗಿ ವರ್ತಿಸಿದ ಉದಾಹರಣೆ ಇದೆಯೇ?’ ಎಂದು ಪ್ರಶ್ನಿಸಿದರು.

‘ಗುಜರಾತ್‌ ವಿಧಾನಸಭೆ ಫಲಿತಾಂಶವು ರಾಮ ಯಾರು? ರಾವಣ ಯಾರು ಎಂಬುದನ್ನು ನಿರ್ಧರಿಸುತ್ತದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.