ಚಿಕ್ಕಮಗಳೂರು:ಮಾತೃಭಾಷೆಗೆ ಆದ್ಯತೆ ನಿಡುವುದರ ಜತೆಗೆ ಅನ್ಯಭಾಷೆಗಳನ್ನು ಕಲಿಯಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ನೀಡಿದರು.
ನಗರದ ಹಿರೇಮಗಳೂರಿನ ಪ್ರಭುಲಿಂಗಸ್ವಾಮಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಿರಿಗೆರೆ ತರಳಬಾಳು ಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾತೃಭಾಷೆ ಬೆಳವಣಿಗೆಗೆ ಒತ್ತು ನೀಡಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿನ ಸಂಸ್ಕೃತಿ, ಸಂಶೋಧನೆ, ಸಾಹಿತ್ಯ ತಿಳಿದುಕೊಳ್ಳಲು ಭಾಷಾಜ್ಞಾನ ಅಗತ್ಯ. ಅನ್ಯ ಭಾಷೆ ಎನ್ನುವ ಕಾರಣಕ್ಕೆ ಹಿಂದಿ ವಿರೋಧಿಸುವುದು ಸರಿಯಲ್ಲ ಎಂದರು.
ಬೆಳಕು ಜ್ಞಾನದ ಸ್ವರೂಪ. ವಿದ್ಯಾರ್ಥಿಗಳನ್ನು ಬೆಳಕಿನಂತೆ ಮಾಡುವ ಶಕ್ತಿ ಶಿಕ್ಷಕರಿಗಿದೆ. ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು, ಸಮಯಪಾಲನೆ ರೂಢಿಸಕೊಳ್ಳಬೇಕು. ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಚಿಕ್ಕಮಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಸಿರಿಗೆರೆ ತರಳಬಾಳು ಸಂಸ್ಥಾನವು ಜಗಜ್ಯೋತಿ ಬಸವೇಶ್ವರರ ಸಿದ್ಧಾಂತಕ್ಕೆ ಅನುಗುಣವಾಗಿ ಅಕ್ಷರ ದಾಸೋಹ ನೀಡುತ್ತಿದೆ ಎಂದರು.
ವಿದ್ಯಾರ್ಥಿಗಳು ಶಾಲೆಗೆ ಬರಲು ಅನುಕೂಲವಾಗುಂತೆ ಸರ್ಕಾರ ಸೈಕಲ್ ವಿತರಿಸುತ್ತಿದೆ. ಆ ಸೈಕಲ್ಗಳನ್ನು ಪೋಷಕರು ಕೃಷಿ ಚಟುವಟಿಕೆಗಳಿಗೆ ಬಳಸಬಾರದು. ವಿದ್ಯಾರ್ಥಿಗಳು ಸೈಕಲ್ಗಳನ್ನು ಸುಸ್ಥಿಯಲ್ಲಿಡಬೇಕು ಎಂದರು.
ಮುಖ್ಯಶಿಕ್ಷಕ ರಾಜಕುಮಾರ್, ಶಿಕ್ಷಕಿ ಶಿಲ್ಪಶ್ರೀ, ಶಿಕ್ಷಕರಾದ ಮಹಾದೇವಪ್ಪ, ಖಿಜರ್ಖಾನ್, ಸಿದ್ದಲಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.