
ತರೀಕೆರೆ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿ, ಹೈನುಗಾರಿಕೆಯನ್ನು ಉತ್ತೇಜಿಸಬೇಕು’ ಎಂದು ಡಿ.ಸಿ.ಸಿ. ಬ್ಯಾಂಕ್ನ ಅಧ್ಯಕ್ಷ ಡಿ.ಎಸ್. ಸುರೇಶ್ ಹೇಳಿದರು.
ಹಾದೀಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಬಿ. ಚಂದ್ರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಹಾದೀಕೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, 233 ಜನರಿಗೆ ₹1.38 ಕೋಟಿ ಸಾಲಸೌಲಭ್ಯ ನೀಡಲಾಗಿದ್ದು, ಇತ್ತೀಚಿನ ದಿನಗಳಲ್ಲಿ ನಬಾರ್ಡ್ನಿಂದ ಸಿಗುವ ಸಾಲ ಸೌಲಭ್ಯ ಕಡಿಮೆಯಾಗಿದೆ. ನಬಾರ್ಡ್ ಶೇ 9ರ ಬಡ್ಡಿದರದಲ್ಲಿ ಡಿ.ಸಿ.ಸಿ. ಬ್ಯಾಂಕ್ಗೆ ಸಾಲ ನೀಡಿದರೆ, ಶೇ 9ರಷ್ಟು ಬಡ್ಡಿಯನ್ನು ಸರ್ಕಾರವೇ ತುಂಬಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೆಸಿಸಿ ಸಾಲ ನೀಡಲಾಗುತ್ತಿದೆ ಎಂದರು.
ನಮ್ಮ ಡಿಸಿಸಿ ಬ್ಯಾಂಕ್ನಲ್ಲಿ ₹1,200 ಕೋಟಿ ಠೇವಣಿ ಹಣವಿದೆ. ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಹೆಚ್ಚಿನ ಠೇವಣಿ ಇಡಬೇಕು. ಹಾದೀಕೆರೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಾವು ಅಧಿಕಾರಕ್ಕೆ ಬಂದ ಮೇಲೆ ₹2.50 ಕೋಟಿ ಸಾಲ ನೀಡಲಾಗಿದೆ ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ಎಚ್.ಬಿ. ಚಂದ್ರಪ್ಪ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಉಪಯೋಗವಾಗುವ ರೀತಿಯಲ್ಲಿ ಇರಬೇಕು. ರೈತರ ಕೃಷಿ ಸಲಕರಣೆಗಳು ಇಲ್ಲಿಯೇ ದೊರೆಯುವಂತೆ ಮಾಡುವುದು ನನ್ನ ಮಹದಾಸೆಯಾಗಿದೆ ಎಂದರು.
ಹಾದೀಕೆರೆ ಸಹಕಾರ ಸಂಘವನ್ನು ಸೂಪರ್ ಮಾರ್ಕೆಟ್ ಆಗಿ ಪರಿವರ್ತಿಸಲಾಗುವುದು. ರೈತರು ಹೆಚ್ಚಿನ ಠೇವಣಿ ಇಡಿ. ನನ್ನ ಅವಧಿಯಲ್ಲಿ ರೈತರ ಅಭ್ಯುದಯಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.
ಲಿಂಗದಹಳ್ಳಿ ಸಹಕಾರ ಸಂಘದ ಓಂಕಾರಪ್ಪ, ನಿರ್ದೇಶಕರಾದ ಅರುಣ್, ನಾಗರಾಜ್, ಪ್ರಸನ್ನಕುಮಾರ್, ವಿಜಯಕುಮಾರ್ ಮಾತನಾಡಿದರು.
ನಿರ್ದೇಶಕರಾದ ಮಂಜುನಾಥ, ಡಿ.ಸಿ. ಬಸವರಾಜ, ಪೂಜಾ, ಕಮಲಾಬಾಯಿ, ವೆಂಕಟೇಶ, ಮುಖಂಡರಾದ ಜ್ಞಾನೇಶ್, ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.