ADVERTISEMENT

ನರಸಿಂಹರಾಜಪುರ: ಮೂಲಸೌಕರ್ಯಕ್ಕೆ ಆಗ್ರಹ

ದಂಡುಬಿಟ್ಟಹಾರ ಹಾಗೂ ನಂದಿಗಾವೆ ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:37 IST
Last Updated 1 ಏಪ್ರಿಲ್ 2023, 5:37 IST
ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿರುವ ನರಸಿಂಹರಾಜಪುರ ತಾಲ್ಲೂಕಿನ ದಂಡುಬಿಟ್ಟಹಾರ,ನಂದಿಗಾವೆ ಗ್ರಾಮಸ್ಥರೊಂದಿಗೆ ತಹಶೀಲ್ದಾರ್ ರಾಜೀವ್ ಚರ್ಚೆ ನಡೆಸಿದರು
ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿರುವ ನರಸಿಂಹರಾಜಪುರ ತಾಲ್ಲೂಕಿನ ದಂಡುಬಿಟ್ಟಹಾರ,ನಂದಿಗಾವೆ ಗ್ರಾಮಸ್ಥರೊಂದಿಗೆ ತಹಶೀಲ್ದಾರ್ ರಾಜೀವ್ ಚರ್ಚೆ ನಡೆಸಿದರು   

ನರಸಿಂಹರಾಜಪುರ: ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ ನಂದಿಗಾವೆ ಮತ್ತು ದಂಡು ಬಿಟ್ಟಹಾರ ಗ್ರಾಮಗಳಿಗೆ ತಹಶೀಲ್ದಾರ್ ರಾಜೀವ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು.

ಈ ಗ್ರಾಮಗಳು ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಗೆ ಸೇರಿವೆ. ತಹಶೀಲ್ದಾರ್ ಗ್ರಾಮಸ್ಥರೊಂದಿಗೆ ಮಾತನಾಡಿ, ಮತದಾನವು ನಿಮ್ಮ ಹಕ್ಕಗಾಗಿದೆ. ಮತದಾನ ಬಹಿಷ್ಕಾರ ಮಾಡಬಾರದು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಗಣೇಶ್, ಮಂಜು, ಗೌರಿ, ಮಂಜಮ್ಮ,ಚೆನ್ನ,
ದೊರೆಸ್ವಾಮಿ, ಅಣ್ಣಮಲೈ, ಗೋಪಾಲ ಮತ್ತಿತರರು ಮಾತನಾಡಿ, ‘ನಮ್ಮ ಗ್ರಾಮಕ್ಕೆ ಮೂಲಸೌಕರ್ಯವೇ ಇಲ್ಲ. ಗ್ರಾಮಕ್ಕೆ ಬಸ್ ಸೌಲಭ್ಯ, ರಸ್ತೆ ಹಾಗೂ ವಿದ್ಯುತ್ ಬೇಕಾಗಿದೆ. ಇಲ್ಲಿನ ಕಾಫಿ ತೋಟದ ಮಾಲೀಕರು ರಸ್ತೆ ದುರಸ್ತಿ ಮಾಡಿಸಿ, ವಾಹನ ನೀಡಿದ್ದರಿಂದ ಪಟ್ಟಣಕ್ಕೆ ಹೋಗಲು ಸಾಧ್ಯವಾಗಿದೆ. ಸದ್ಯಕ್ಕೆ ಮನೆ ನೀಡದಿದ್ದರೂ ಸಮಸ್ಯೆಯಿಲ್ಲ. ಬಸ್ಸಿನ ಸೌಕರ್ಯ, ವಿದ್ಯುತ್ ಹಾಗೂ ರಸ್ತೆ ನಿರ್ಮಾಣ ಮಾಡಿಸಿಕೊಡಬೇಕು. ಈ ಬಗ್ಗೆ ಸೂಕ್ತ ಆಶ್ವಾಸನೆ ನೀಡುವವರೆಗೂ ನಾವು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು’ಎಂದರು.

ADVERTISEMENT

ತಹಶೀಲ್ದಾರ್ ರಾಜೀವ್ ಮಾತನಾಡಿ, ‘ಜಿಲ್ಲಾಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಲಾಗುವುದು. ಗ್ರಾಮ ಪಂಚಾಯಿತಿಯಿಂದ ಮನೆ ಕೊಡಿಸಲಾಗುವುದು. ಮೂಲ ಸೌಕರ್ಯಗಳು ಇಲ್ಲದಿರುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು. ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಡಿ.ಮಂಜುನಾಥ್, ಗ್ರಾಮಲೆಕ್ಕಿಗಿ ಮಂಜುಳಾ, ಎಂಜಿನಿಯರ್ ವಿನಾಯಕ, ಗ್ರಾಮ ಸಹಾಯಕ ರಂಜಿತ್, ದಂಡು ಬಿಟ್ಟಹಾರ ಹಾಗೂ ನಂದಿಗಾವೆ ಗ್ರಾಮದ 70 ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.