ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ದೇವೀರಮ್ಮ ಬೆಟ್ಟಕ್ಕೆ ನಾಡಿನ ವಿವಿಧೆಡೆಗಳಿಂದ ಬಂದಿದ್ದ ಭಕ್ತರ ದಂಡು ದೇವಿ ದರ್ಶನ ಮಾಡಿದರು.
ಸುಮಾರು ಮೂರು ಸಾವಿರ ಅಡಿ ಎತ್ತರದ ಬೆಟ್ಟವನ್ನು ಕಾಲುನಡಿಗೆಯಲ್ಲಿ ಹತ್ತಿ ದೇವಿಗೆ ಭಕ್ತಿ ಸಮರ್ಪಿಸಿದರು. ತಡರಾತ್ರಿಯಿಂದಲೇ ಭಕ್ತರ ದಂಡು ಬೆಟ್ಟದ ಕಡೆಗೆ ಮುಖಮಾಡಿತ್ತು. ಕಲ್ಲುಮಣ್ಣು, ಹುಲ್ಲಿನ ದುರ್ಗಮ ಹಾದಿಯಲ್ಲಿ ಹೆಜ್ಜೆ ಹಾಕಿದರು.
ವರ್ಷಕ್ಕೊಮ್ಮೆ ದೀಪಾವಳಿಯ ನರಕಚತುರ್ದಶಿಯಂದು ಬೆಟ್ಟದಲ್ಲಿನ ಮಂಟಪದಲ್ಲಿ ದೇವಿಗೆ ಜರುಗುವ ಪೂಜೆಯನ್ನು ಕಣ್ತುಂಬಿಕೊಂಡರು.
ಮಲ್ಲೇನಹಳ್ಳಿಯ ಬಿಂಡಿಗದ ಮುಖ್ಯದಾರಿ, ಅರಿಸಿನಗುಪ್ಪೆ ಮತ್ತು ಮಾಣಿಕ್ಯಧಾರಾ ಕಡೆಗಿ ನ ಹಾದಿಗಳ ಲ್ಲಿ ಭಕ್ತರ ಬೆಟ್ಟ ಏರಿದರು.
ದೇವಿಗೆ ಬೆಣ್ಣೆ, ಬಟ್ಟೆ, ತುಪ್ಪ, ಕಾಣಿಕೆ, ಹರಕೆ ಒಪ್ಪಿಸಿದರು.
ಮಾಪುಗಳನ್ನು(ಕಟ್ಟಿಗೆ) ಹೊತ್ತು ತಂದಿದ್ದವರು ಕೊಂಡಕ್ಕೆ ಸಮರ್ಪಿಸಿದರು. ಕೆಲವರು ಗುಡ್ಡದ ಹುಲ್ಲುಗಾವಲಿನಲ್ಲಿ ಪವಡಿಸಿ, ಕುಳಿತು ನಲಿದರು.ಬಹಳಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಬೆಟ್ಟದ ತಪ್ಪಲಿನ ಬಿಂಡಿಗದಲ್ಲಿನ ದೇವೀರಮ್ಮ ದೇಗುಲದಲ್ಲಿ ಪ್ರಸಾದ ವ್ಯವಸ್ಥೆ ಇತ್ತು.
ವಿವಿಧೆಡೆಗಳಿಂದ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಕಡೂರು, ಬೀರೂರು, ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿಗೆ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.