ಚಿಕ್ಕಮಗಳೂರು: ‘ನಗರದ 25ನೇ ವಾರ್ಡ್ನಲ್ಲಿ ಕುಡಿಯವ ನೀರಿನ ಪೈಪ್ ರಿಪೇರಿಗೆ ರಸ್ತೆ ಅಗೆದ ವಿಚಾರದಲ್ಲಿ ಜಗಳ ನಡೆದಿದೆ.ಜಟಾಪಟಿ ನಡೆಸಿದ ವಾರ್ಡ್ನ ಸದಸ್ಯ ಲಕ್ಷ್ಮಣ ಮತ್ತು ಧನಂಜಯಗೌಡ ಇಬ್ಬರೊಂದಿಗೂ ಮಾತನಾಡಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ನಗರಸಭೆ ಎಲ್ಲ ಸದಸ್ಯರನ್ನು ಸಮಾನವಾಗಿ ಕಾಣುತ್ತೇನೆ. ಲಕ್ಷ್ಮಣ ಅವರಿಗೂ ನನ್ನ ಸ್ವಭಾವ ಗೊತ್ತು. ರಾಜಕಾರಣ ಮಾಡಿದ್ದೇನೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರೋಪಿಸಿರುವುದರಲ್ಲಿ ಹುರುಳಿಲ್ಲ’ ಎಂದು ಉತ್ತರಿಸಿದರು.
‘ಈ ಹಿಂದೆ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯದಂತೆ ಉಳಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಾಧ್ಯವಾಗಿಲ್ಲ, ಇನ್ನು ಬೇರೆ ಪಕ್ಷದವರನ್ನು ಸೆಳೆಯುತ್ತಾರೆಯೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಶಾಸಕರು ಯಾಕೆ ಪಕ್ಷ ತೊರೆದರು ಎಂಬ ಬಗ್ಗೆ ಅವರು ಸಂಶೋಧನೆ ನಡೆಸಲಿ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಅವರನ್ನು ಘೋಷಿಸಿದರೆ ಡಿಕೆಶಿ ಅವರೇ ಪಕ್ಷ ತೊರೆಯುತ್ತಾರೆ. ಡಿಕೆಶಿ ಅವರನ್ನು ಘೋಷಿಸಿದರೆ ಸಿದ್ದರಾಮಯ್ಯ ಪಕ್ಷ ತೊರೆಯುತ್ತಾರೆ’ ಎಂದು ಉತ್ತರಿಸಿದರು.
ಡಿಕೆಶಿ ಅವರನ್ನು ಬಿಜೆಪಿ ಶಾಸಕರು ಭೇಟಿಯಾಗಿದ್ದರೋ ಅಥವಾ ಡಿಕೆಶಿ ಅವರೇ ಆ ಶಾಸಕರನ್ನು ಭೇಟಿಯಾಗಿದ್ದರೋ ಗೊತ್ತಿಲ್ಲ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಯಾರು ತಯಾರಾಗಿದ್ದಾರೆ ಎಂದು ಡಿಕೆಶಿ ಬಹಿರಂಗಪಡಿಸಲಿ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.