ADVERTISEMENT

ಕಳಸದ ಬಸದಿಯಲ್ಲಿ ಜೈನ ಶಾಸನ ಪತ್ತೆ

ಸೊನ್ನೆಯಿಂದ ಆರಂಭವಾಗುವ ಶಾಸನದ ಪ್ರತಿ ಸಾಲು– ಪ್ರೊ.ಟಿ. ಮುರುಗೇಶಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 1:30 IST
Last Updated 11 ಸೆಪ್ಟೆಂಬರ್ 2019, 1:30 IST
ಪ್ರತಿಮೆಯ ಹಿಂಭಾಗದಲ್ಲಿ ಇರುವ ಶಾಸನ
ಪ್ರತಿಮೆಯ ಹಿಂಭಾಗದಲ್ಲಿ ಇರುವ ಶಾಸನ   

ಮಂಗಳೂರು: ಚಿಕ್ಕಮಗಳೂರು ಜಿಲ್ಲೆ ಕಳಸದ ಚಂದ್ರನಾಥ ತೀರ್ಥಂಕರರ ಬಸದಿಯಲ್ಲಿನ ಒಂದು ಚಿಕ್ಕ ಚಂದ್ರನಾಥ ತೀರ್ಥಂಕರರ ಪ್ರತಿಮೆಯ ಹಿಂಭಾಗದಲ್ಲಿ ಜೈನ ಶಾಸನವೊಂದು ಪತ್ತೆಯಾಗಿದೆ.

ಶಿರ್ವದ ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಅವರು ಈ ಶಾಸನವನ್ನು ಪತ್ತೆ ಮಾಡಿದ್ದಾರೆ. ಈ ಪುಟ್ಟ ಶಾಸನದಲ್ಲಿ ಪ್ರತಿ ಸಾಲನ್ನು ಒಂದು ಸೊನ್ನೆಯಿಂದ ಆರಂಭಿಸಲಾಗಿದೆ. ಶಾಸನದ ಆರಂಭದಲ್ಲಿಯೇ, ಅಂಗೀರಸ ಸಂವತ್ಸರ, ಆಷಾಢ ಶುದ್ಧ ದಶಮಿ ಮೂರು ಎಂದು ಕಾಲವನ್ನು ಉಲ್ಲೇಖಿಸಲಾಗಿದೆ. ಇದು ಕ್ರಿ.ಶ. 1512 ಜುಲೈ 2 ಶುಕ್ರವಾರಕ್ಕೆ ಸರಿಹೊಂದುತ್ತದೆ. ಶಾಸನದಲ್ಲಿ ಕಳಸದ ದೇವಚಂದ್ರ ಜೈನ ಮುನಿಗಳನ್ನು ಹೆಸರಿಸಲಾಗಿದೆ.

ಇದೇ ಬಸದಿಯ ಪ್ರಧಾನ ಅಧಿದೇವತೆಯಾದ ಚಂದ್ರನಾಥ ವಿಗ್ರಹದ ಎರಡೂ ಪಾರ್ಶ್ವಗಳಲ್ಲಿ ಬರೆದ ಶಾಸನದಲ್ಲಿ ಮೂಲಸಂಘ, ಪನಸೋಗೆ ಬಳಿ, ದೇಶೀಯ ಗಣ, ಪುಸ್ತಕ ಗಚ್ಚ, ಕುಂದಕುಂದಾನ್ವಯ ಲಲಿತಕೀರ್ತಿ ದೇವರ ಶಿಷ್ಯರಾಗಿದ್ದ ದೇವಚಂದ್ರ ದೇವರು ಈ ವಿಗ್ರಹವನ್ನು ಪ್ರತಿಷ್ಠಾಪಿಸಿದ ವಿಷಯವನ್ನು ಹೇಳಲಾಗಿದೆ.

ADVERTISEMENT
ಕಳಸದ ಚಂದ್ರನಾಥ ತೀರ್ಥಂಕರರ ಬಸದಿಯಲ್ಲಿನ
ಒಂದು ಚಿಕ್ಕ ಚಂದ್ರನಾಥ ತೀರ್ಥಂಕರರ ಪ್ರತಿಮೆ

ಶಾಸನೋಕ್ತ ಪನಸೋಗೆ ಗ್ರಾಮವು ಈಗಿನ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಅತ್ಯಂತ ಪ್ರಾಚೀನ ಐತಿಹಾಸಿಕ ನೆಲೆ. ಚೆಂಗಾಳ್ವರ ಆಡಳಿತ ಕೇಂದ್ರ. 11ನೇ ಶತಮಾನದಲ್ಲಿ ಪನಸೋಗೆ ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಅಲ್ಲಿ 60ಕ್ಕೂ ಹೆಚ್ಚು ಬಸದಿಗಳು ಇದ್ದ ಬಗ್ಗೆ ಶಾಸನಾಧಾರಗಳಿವೆ.

ಅಲ್ಲಿ ತ್ರಿಕೂಟಾಚಲ ಜೈನ ಬಸದಿ ಇದೆ. ಚಂಗಾಳ್ವರ ದೊರೆ ವೀರ ರಾಜೇಂದ್ರನು ಆದಿನಾಥ, ಚಂದ್ರನಾಥ ಮತ್ತು ನೇಮಿನಾಥ ತೀರ್ಥಂಕರರ ಬಸದಿಯನ್ನು ನಿರ್ಮಿಸಿದ್ದಾನೆ. ಕಳಸದ ದೇವಚಂದ್ರ ದೇವ ಪನಸೋಗೆಯ ಲಲಿತಕೀರ್ತಿಗಳ ಶಿಷ್ಯರಾಗಿದ್ದರು. ಶೈವ-ಜೈನ ಸಂಘರ್ಷಗಳಿಂದ ದೇವಚಂದ್ರ ಕಳಸಕ್ಕೆ ಬಂದು ಚಂದ್ರನಾಥ ಬಸದಿಯನ್ನು ನಿರ್ಮಾಣ ಮಾಡಿದರು. ಅದೇ ಬಸದಿಯ ಚತುರ್ವಿಂಶತಿ ತೀರ್ಥಂಕರರ ವಿಗ್ರಹದ ಪೀಠದಲ್ಲಿನ ಶಾಸನದಲ್ಲಿ, ಶ್ರೀ ಚಂದ್ರನಾಥನ ಚೈತ್ಯಾಲಯದಲು ತೊಳಹರ ಬಳಿಯ ಅನತಕಶೆಟ್ಟಿತಿಯ (ಅನಂತಕ್ಕಶೆಟ್ಟಿತಿ) ಮಗ ಆದಿಶೆಟ್ಟಿ ಚತುರ್ವಿಂಶತಿ ತೀರ್ಥಂಕರರ ಪ್ರತಿಮೆಯನು ಇರಿಸಿ ಕೃತಾರ್ಥನಾದದ್ದನ್ನು ದಾಖಲಿಸಿದೆ.

ಶಾಸನೋಕ್ತ ಚಂದ್ರಪ್ರಭ ಅಥವಾ ಚಂದ್ರನಾಥ ತೀರ್ಥಂಕರ 24 ಜನ ಜೈನ ತೀರ್ಥಂಕರರಲ್ಲಿ 8 ನೇಯವರು ಅಥವಾ ಎಂಟನೇ ತೀರ್ಥಂಕರ ಚಂದ್ರ ಅಥವಾ ಅರ್ಧಚಂದ್ರ ಆತನ ಲಾಂಛನವಾಗಿದೆ. ನಾಗ ಅಥವಾ ನಾಗಕೇಸರ ಆತನ ಪವಿತ್ರ ವೃಕ್ಷವಾಗಿದೆ. ಜ್ವಾಲಾ-ಮಾಲಿನ ಆತನ ಅಭಿಮಾನಿ ದೇವತೆಯಾಗಿದ್ದಾಳೆ.

ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ, ಕಳಸದ ಸುಪ್ರೀತಾ ಕೆ.ಎನ್. ಹಾಗೂ ಕಳಸದ ಚಂದ್ರನಾಥ ಬಸದಿಯ ಅರ್ಚಕ ಅಜಿತ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

ಕ್ರಿ.ಶ.1512 ರ ಶಾಸನ

ಈ ಶಾಸನದ ಕಾಲ ಕ್ರಿ.ಶ. 1535. ಅಂದರೆ, 1535 ರ ಕಾಲಕ್ಕೆ ಚಂದ್ರನಾಥ ಬಸದಿ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಸಾಂತರ ಆಳ್ವಿಕೆಗೆ ಒಳಪಟ್ಟ ಹಲವು ಪ್ರಮುಖ ಜೈನ ತೀರ್ಥಕ್ಷೇತ್ರಗಳಲ್ಲಿ ಕಳಸವನ್ನೂ ಹೆಸರಿಸಲಾಗಿದೆ. ‌

ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಶಾಸನದ ಕಾಲ ಕ್ರಿ.ಶ. 1512. ಈ ಕೊನೆಯ ಎರಡು ಶಾಸನಗಳ ಕಾಲಕ್ಕಿಂತ ಮೊದಲೇ, ಲಲಿತಕೀರ್ತಿ ಮುನಿಗಳ ಶಿಷ್ಯರಾದ ದೇವಚಂದ್ರರು ಚಂದ್ರನಾಥ ತೀರ್ಥಂಕರರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರೆಂದು ಇದರಿಂದ ತಿಳಿಯುತ್ತದೆ.

ಇದು ವಿಜಯನಗರದ ಮಾಂಡಲೀಕರಾಗಿದ್ದ ಕಳಸ-ಕಾರ್ಕಳದ ಭೈರರಸ ಒಡೆಯರ ಕಾಲದ ಶಾಸನವಾಗಿದೆ. ಇವರು ತಮ್ಮನ್ನು ಕಳಸ ಕಾರ್ಕಳದ ಅರಸರೆಂದೇ ಗುರುತಿಸಿಕೊಂಡರು ಎಂದು ಪಿ.ಎನ್. ನರಸಿಂಹಮೂರ್ತಿ ತಿಳಿಸಿದ್ದಾರೆ.

ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲಿನ ಶಾಸನದಲ್ಲಿ ‘ಕಿವಿಯಲಿ ಕೇಳಿ, ಕಂಣಲಿ ನೋಡಿದ ಪಾಪಕೆ ಪ್ರಾಯಶ್ಚಿತ್ತವಾಗಿ ಪ್ರತಿ ಚಂದ್ರನಾಥನ’ ಎಂದು ದಾಖಲಿಸಲಾಗಿದೆ.

-ಪ್ರೊ.ಟಿ. ಮುರುಗೇಶಿ, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.