ಶೃಂಗೇರಿ: ‘ಅರ್ಜಿ ನಮೂನೆ 53 ಮತ್ತು 57ರಲ್ಲಿ 2005ರ ಒಳಗೆ ರೈತರು ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ಕೂಡಲೇ ಗಣನೆಗೆ ತೆಗೆದುಕೊಳ್ಳಬೇಕು. ಬಳಿಕ ಬಂದ ಅರ್ಜಿಗಳ ಕುರಿತು ಅರಣ್ಯ ಕಾಯ್ದೆಯ ನಿಯಮಗಳನ್ನು ಅನುಸರಿಸಿದ ಬಳಿಕ ಪಹಣಿ ನೀಡುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಹೇಳಿದರು.
ಶೃಂಗೇರಿ ತಾಲ್ಲೂಕು ಕಚೇರಿಯಲ್ಲಿ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
`ಸರ್ಕಾರವು ತಮಗೆ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಮೂರು ತಾಲ್ಲೂಕಿನ 4 ಹೋಬಳಿಗಳ ಅಕ್ರಮ-ಸಕ್ರಮದ ಜವಾಬ್ದಾರಿ ವಹಿಸಿದೆ. ಮೊದಲು ಸಣ್ಣ ರೈತರ ಅರ್ಜಿಗಳನ್ನು ಮಂಜೂರಾತಿಗೆ ಎತ್ತಿಕೊಳ್ಳಲಾಗುವುದು. ಈಗಾಗಲೇ ಮಂಜೂರಾತಿಯಾಗಿ ಹಕ್ಕುಪತ್ರ ನೀಡಿರುವ 366 ಅರ್ಜಿದಾರರಿಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ್ದೇನೆ. ಅವರಿಗೆ ಪಹಣಿಯನ್ನು ಮೊದಲು ಕೊಡುತ್ತೇವೆ. ಇದಕ್ಕಾಗಿ ಯಾರೂ ಲಂಚ ಕೊಡಬಾರದು ಮತ್ತು ಮಧ್ಯವರ್ತಿಗಳನ್ನು ಆಶ್ರಯಿಸಬಾರದು’ಎಂದರು.
’ಮಲೆನಾಡಿನಲ್ಲಿ ಡೀಮ್ಡ್ ಫಾರೆಸ್ಟ್, ಸೊಪ್ಪಿನಬೆಟ್ಟ ಹೀಗೆ ಸಾಕಷ್ಟು ಗೊಂದಲಗಳಿವೆ. ಈಗಾಗಲೇ 94ಸಿಯಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರು ಈ ಕುರಿತು ಕೂಡಲೇ ಗಮನ ನೀಡಿ ಬಡವರಿಗೆ ವಸತಿ ಸೌಕರ್ಯ ನೀಡಬೇಕು ಎಂದಿದ್ದಾರೆ. ಆದರೆ, ಶಾಸಕ ಟಿ.ಡಿ ರಾಜೇಗೌಡರು ಈ ಹಿಂದೆ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆದು ರೈತರು ಸಲ್ಲಿಸಿದ ಅರ್ಜಿಯನ್ನು ಪರಿಷ್ಕರಿಸಬೇಕು ಎಂದು ನಿರ್ಣಯ ಮಾಡಿದ್ದಾರೆ. ಇದರಿಂದ ಗೊಂದಲವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ 8 ಹೋಬಳಿಯಲ್ಲಿ ನಡೆಯುವ ಅಕ್ರಮ-ಸಮಿತಿ ಸಭೆಯಲ್ಲಿ ರೈತರು ಸಲ್ಲಿಸಿದ ಅರ್ಜಿಯ ಕುರಿತು ಹೆಚ್ಚಿನ ಗಮನವನ್ನು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ನೀಡಬೇಕು’ ಎಂದರು.
ಸಭೆಯಲ್ಲಿ ಸಮಿತಿಯ ನಾಮನಿರ್ದೇಶನ ಸದಸ್ಯರಾದ ಮಂಜುನಾಥ್, ಸುನಿತಾ, ತಹಶೀಲ್ದಾರ್ ಗೌರಮ್ಮ, ಶಿರಸ್ತೇದಾರ್ ಶಿವರಾಮ್.ಕೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.