
ಮೂಡಿಗೆರೆ: ‘ಮಾದಕ ವಸ್ತುಗಳು ಅದನ್ನು ಬಳಸುವವರಿಗೆ ಮಾತ್ರವಲ್ಲದೇ, ಇಡೀ ಸಮಾಜಕ್ಕೆ ಶತ್ರುವಾಗಿದೆ’ ಎಂದು ವಕೀಲ ಬಿ.ಟಿ. ನಟರಾಜ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತರುವೆ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ‘ಮಾದಕ ವ್ಯಸನ ಮುಕ್ತ, ಸೈಬರ್ ಅಪರಾಧ ಬಗ್ಗೆ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ಮಾದಕ ವಸ್ತು ಸೇವನೆಯು ಮೊದಲು ಹವ್ಯಾಸವಾಗಿ ಮಾರ್ಪಟ್ಟು ಬಳಿಕ, ಚಟವಾಗಿ ಪರಿಣಮಿಸುತ್ತದೆ. ಮಾದಕ ವಸ್ತುಗಳು ಅದನ್ನು ಸೇವಿಸುವ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುವುದು ಮಾತ್ರವಲ್ಲದೇ, ಆತನ ಕುಟುಂಬ, ಸಮಾಜಕ್ಕೂ ಕಂಟಕ ಉಂಟು ಮಾಡುತ್ತದೆ. ಈ ಜಾಲವು ಹೆಚ್ಚಾಗಿ ಯುವ ಸಮೂಹವನ್ನೇ ಬಳಸಿಕೊಳ್ಳುವುದರಿಂದ ಯುವಕ, ಯುವತಿಯರು ತಮ್ಮ ಹದಿಹರೆಯದಲ್ಲಿ ಹೆಚ್ಚು ಜಾಗೃತರಾಗಿ ಇವುಗಳಿಂದ ದೂರ ಉಳಿಯಬೇಕು. ಅರಿಯದೇ ತಪ್ಪು ಮಾಡಿದರೂ ಕಾನೂನಿನ ಶಿಕ್ಷೆಯಿಂದ ಹೊರಗುಳಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ನಂತರ ಪಶ್ಚಾತ್ತಾಪ ಪಡುವುದಕ್ಕಿಂತಲೂ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಜಾಗೃತಿ ವಹಿಸುವುದು ಸೂಕ್ತ’ ಎಂದರು.
ಬಣಕಲ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ರವಿ ಮಾತನಾಡಿ, ‘ತಂತ್ರಜ್ಞಾನ ಬೆಳೆದಂತೆ ಅದರ ದುರುಪಯೋಗ ಕೃತ್ಯಗಳು ಸಹ ಬೆಳೆಯುತ್ತಿವೆ. ಪೊಲೀಸರ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಮೋಸಗಾರರ ಜಾಲಗಳು ಸಕ್ರಿಯವಾಗುತ್ತಿವೆ. ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದಾಗ, ಯಾವುದೇ ಒಟಿಪಿ, ಆಧಾರ್ ಸಂಖ್ಯೆಗಳನ್ನು ನೀಡಬಾರದು. ನಿರುದ್ಯೋಗ ಸಮಸ್ಯೆಯನ್ನು ಬಳಕೆ ಮಾಡಿಕೊಳ್ಳುವ ನೀಚರು, ಉದ್ಯೋಗದ ಆಮಿಷ ನೀಡಿ ಹಣ ಲಪಟಾಯಿಸುವ ಕೃತ್ಯವನ್ನು ಮಾಡುತ್ತಾರೆ. ಆನ್ಲೈನ್ನಲ್ಲಿ ಬಹುಮಾನ ಬಂದಿರುವ ಬಗ್ಗೆ ಬಣ್ಣದ ಮಾತುಗಳನ್ನಾಡಿ, ಖಾತೆಯಲ್ಲಿರುವ ಹಣವನ್ನು ಪಡೆಯುತ್ತಾರೆ. ಐಷಾರಾಮಿ ಬದುಕಿನ ಕನಸನ್ನು ನಿರ್ಮಿಸಿ ಆರ್ಥಿಕ ಸಂಕಷ್ಟ ಒದಗಿಸುತ್ತಾರೆ. ಆನ್ಲೈನ್ ಖರೀದಿಯ ವೇಳೆಯಲ್ಲಿಯೂ ಯುವಜನರು ಜಾಗೃತರಾಗಿರಬೇಕು. ಆನ್ಲೈನ್ ವಂಚನೆಯ ಮುಖಗಳ ಬಗ್ಗೆ ಅರಿವಿದ್ದರೆ ವಂಚನೆಗೆ ಒಳಗಾಗದಿರಬಹುದು. ಯಾವುದೇ ವಂಚನೆ ನಡೆದರೂ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಶೀಘ್ರವಾಗಿ ಕಾನೂನು ಕ್ರಮಕೈಗೊಳ್ಳಲು ಸಹಾಯಕವಾಗುತ್ತದೆ’ ಎಂದರು.
ಕಾಲೇಜಿನ ಕನ್ನಡ ಉಪನ್ಯಾಸಕ ರವಿ ಮಾತನಾಡಿ, ‘ಜೀವನ ಘಟ್ಟದಲ್ಲಿ ಹದಿಹರೆಯವು ಆಕರ್ಷಣೆಯ ಅವಧಿಯಾಗಿದ್ದು, ಈ ಅವಧಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ತಮ್ಮಬದುಕನ್ನು ರೂಪಿಸುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಯಾವುದೋ ಕಾರಣಕ್ಕಾಗಿ ತಪ್ಪು ಹಾದಿ ಹಿಡಿದರೆ ಇಡೀ ಬದುಕನ್ನು ಸಂಕಷ್ಟದಲ್ಲಿ ಕಳೆಯ ಬೇಕಾಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸತೀಶ್ ಪ್ರಸಾದ್ ಜೈಸ್ವಾಲ್, ಉಪನ್ಯಾಸಕರಾದ ದಿವ್ಯಾಶ್ರೀ, ನಯನ, ಸುಮಿತ್ರಾ ಭಾಗವಹಿಸಿದ್ದರು.
‘ಪ್ರಜಾವಾಣಿ’ಯ ಈ ಜಾಗೃತಿ ಕಾರ್ಯವು ಶ್ಲಾಘನೀಯವಾಗಿದ್ದು ಆನ್ಲೈನ್ಗಳಲ್ಲಿ ನಡೆಯುವ ವಂಚನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದು ಉಪಯುಕ್ತವಾಯಿತುಡಿ.ಎ. ಅಂಜನಾ, ದ್ವಿತೀಯ ಪಿಯುಸಿ
ಮೊಬೈಲ್ ಫೋನ್ ದಿನ ಬಳಕೆಯ ವಸ್ತುವಿನಂತಾಗಿದ್ದು ಅದರಲ್ಲಿ ನಡೆಯುವ ಅಪರಾಧ ಕೃತ್ಯಗಳ ಇನ್ನೊಂದು ಮುಖವನ್ನು ಇಂದಿನ ಜಾಗೃತಿ ಕಾರ್ಯಕ್ರಮವು ಪರಿಚಯಿಸಿತುಎಸ್.ಯು. ಜಯಶ್ರೀ, ದ್ವಿತೀಯ ಪಿಯುಸಿ
ಮಾದಕ ವಸ್ತುಗಳ ಬಳಕೆಯು ಇಡೀ ಕುಟುಂಬವನ್ನೇ ಸರ್ವನಾಶಮಾಡುತ್ತದೆ ಎಂಬ ಅರಿವು ಉಂಟಾಯಿತು. ಈ ಕಾರ್ಯಾಗಾರದಲ್ಲಿ ಪಡೆದ ಅರಿವನ್ನು ನಮ್ಮೂರಿನ ಜನರಿಗೂ ತಿಳಿಸುತ್ತೇನೆಪೂಜಾ, 10ನೇ ತರಗತಿ
ಮೊಬೈಲ್ ಫೋನ್ ಬಳಕೆಯ ವೇಳೆ ಗೊತ್ತಿಲ್ಲದೇ ಆಗುವ ಅಪರಾಧಗಳ ಬಗ್ಗೆ ತಿಳಿಸಿ ಕೊಟ್ಟಿದ್ದು ಮೊಬೈಲ್ ಫೋನ್ ಬಳಸುವಾಗ ಜಾಗೃತಿಯಾಗಿರಬೇಕು ಎಂಬ ಅರಿವು ಮೂಡಿಸಿತುಬಿ. ಅಂಕುರ್, 9ನೇ ತರಗತಿ
ತಪ್ಪು ಮಾಡಿದ ಬಳಿಕ ಶಿಕ್ಷೆಗೊಳಗಾಗಿ ಪಶ್ಚಾತ್ತಾಪ ಪಡುವುದಕ್ಕಿಂತಲೂ ತಪ್ಪುಗಳು ನಡೆಯದಂತೆ ಜಾಗೃತಿ ಹೊಂದುವುದು ಮುಖ್ಯವಾಗುತ್ತದೆಬಿ.ಟಿ. ನಟರಾಜ್, ವಕೀಲ ಮೂಡಿಗೆರೆ
‘ಮಾದಕ ವಸ್ತುಗಳಿಂದ ದೂರ ಉಳಿಯುವ ಪ್ರತಿಜ್ಞೆ ಕೈಗೊಳ್ಳಿ’
‘ಮಾದಕ ವಸ್ತುಗಳಿಗೆ ಯುವಜನರೇ ಹೆಚ್ಚಾಗಿ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಮಾದಕ ವಸ್ತುಗಳ ಜಾಲವು ವಿಷವರ್ತುಲವಾಗಿದ್ದು ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಆಸೆ–ಆಮಿಷ ಪಾರ್ಟಿಯ ಹೆಸರಿನಲ್ಲಿ ಮಾದಕ ವಸ್ತುಗಳ ಪರಿಚಯ ಮಾಡಿಕೊಡುವ ಕೃತ್ಯಗಳು ನಡೆಯುವ ಅಪಾಯವಿರುತ್ತದೆ. ಯುವಜನರು ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು. ಒಮ್ಮೆ ಈ ಜಾಲದಲ್ಲಿ ಸಿಲುಕಿದರೆ ಹೊರ ಬರಲಾಗದೇ ಅವಮಾನ ನೋವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ತಮ್ಮ ಕುಟುಂಬ ಕೂಡ ನೋವು ಅವಮಾನ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರ ಉಳಿಯುವ ಪ್ರತಿಜ್ಞೆ ಕೈಗೊಳ್ಳಬೇಕು’ ಎಂದು ಬಣಕಲ್ ಜೇಸಿಐ ವಿಸ್ಮಯ ಘಟಕದ ಸಂಸ್ಥಾಪಕ ಸುರೇಶ್ ಎಸ್. ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.