ADVERTISEMENT

ಊರುಬಗೆ: ಮತ್ತೆ ಕಾಡಾನೆ ದಾಳಿ, ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೇಟು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:14 IST
Last Updated 25 ಸೆಪ್ಟೆಂಬರ್ 2020, 1:14 IST
ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮದ ಕೃಷ್ಣೇಗೌಡ ಎಂಬುವವರ ಭತ್ತದ ಗದ್ದೆಗೆ ಗುರುವಾರ ಮುಂಜಾನೆ ದಾಳಿ ನಡೆಸಿರುವ ಕಾಡಾನೆಗಳು ಭತ್ತದ ಪೈರನ್ನು ತಿಂದು ಹಾನಿಗೊಳಿಸಿವೆ.
ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮದ ಕೃಷ್ಣೇಗೌಡ ಎಂಬುವವರ ಭತ್ತದ ಗದ್ದೆಗೆ ಗುರುವಾರ ಮುಂಜಾನೆ ದಾಳಿ ನಡೆಸಿರುವ ಕಾಡಾನೆಗಳು ಭತ್ತದ ಪೈರನ್ನು ತಿಂದು ಹಾನಿಗೊಳಿಸಿವೆ.   

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಗುರುವಾರ ಮುಂಜಾನೆ ಭತ್ತದ ಪೈರನ್ನು ನಾಶಗೊಳಿಸಿವೆ.

ಊರುಬಗೆ ಪ್ರದೇಶಕ್ಕೆ ಬಂದ ಮೂರು ಕಾಡಾನೆಗಳು, ಕೃಷ್ಣೇಗೌಡ ಎಂಬುವವರ ಭತ್ತದ ಗದ್ದೆಗೆ ಇಳಿದು, ನಾಟಿ ಮಾಡಿದ್ದ ಪೈರೆಲ್ಲವನ್ನೂ ನಾಶ ಗೊಳಿಸಿವೆ. ಸುತ್ತಮುತ್ತಲ ಕಾಫಿ ತೋಟ ಗಳಲ್ಲಿ ತಿರುಗಾಡಿ, ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಯನ್ನು ನಾಶಗೊಳಿ ಸಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೂಲರಹಳ್ಳಿ, ಗುತ್ತಿ ಭಾಗಗಳಲ್ಲಿ ದಾಳಿ ನಡೆಸುತ್ತಿದ್ದ ಕಾಡಾನೆಗಳು, ಗುರುವಾರ ಊರುಬಗೆ ಪ್ರದೇಶಕ್ಕೂ ಕಾಲಿಟ್ಟಿದ್ದು, ಊರುಬಗೆ, ಸತ್ತಿಗನಹಳ್ಳಿ, ಹೊಸ್ಕೆರೆ, ಭೈರಾಪುರ, ಗೌಡಳ್ಳಿ ಭಾಗಗಳಲ್ಲಿ ಕಾಡಾನೆ ಭೀತಿ ಎದುರಾಗಿದೆ. ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಚಟುವಟಿಕೆಗಳು ಸ್ತಬ್ಧವಾಗಿದ್ದು, ಕಾಫಿ ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಕಳೆದ 15 ದಿನಗಳಿಂದಲೂ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಮೂರು ಆನೆಗಳ ಒಂದು ತಂಡ ಹಾಗೂ ಒಂಟಿ ಸಲಗವೊಂದು ಪ್ರತ್ಯೇಕವಾಗಿ ದಾಳಿ ನಡೆಸುತ್ತಿದ್ದು, ಪ್ರತಿ ದಿನ ಬೆಳೆ ಹಾನಿಗೊಳಿಸುತ್ತಿವೆ. ಹಗಲು ವೇಳೆಯಲ್ಲಿ ಅರಣ್ಯ ಸೇರಿಕೊಳ್ಳುವ ಕಾಡಾನೆಗಳು, ರಾತ್ರಿಯಾಗುತ್ತಿದ್ದಂತೆ ಮನೆ ಬಾಗಿಲಿಗೆ ಬಂದು ಬಾಳೆ, ಕಾಫಿ, ಅಡಿಕೆ, ಭತ್ತದ ಬೆಳೆಯನ್ನು ನಾಶಗೊಳಿಸುತ್ತಿವೆ. ಕಾಡಾನೆಗಳ ದಾಳಿಯಿಂದ ಪಾರಾಗಲು ವಿಶೇಷ ಯೋಜನೆ ರೂಪಿಸಬೇಕು’ ಎಂದು ಗ್ರಾಮಸ್ಥ ರತನ್ ಊರುಬಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.