
ಆಲ್ದೂರು: ‘ಯಾವುದೇ ತಾರತಮ್ಯ ಇಲ್ಲದೆ ಕ್ಷೇತ್ರದ ಎಲ್ಲ ಕಡೆಗಳಲ್ಲಿ ಸಮತೋಲನದಿಂದ ಅನುದಾನ ಹಂಚಿಕೆ ಮಾಡಿದ್ದೇನೆ’ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಸಂತೆ ಮೈದಾನ ಗ್ರಾಮಸ್ಥರು ಸ್ಮಶಾನ ಭೂಮಿ ಮಂಜೂರು ಮಾಡುವಂತೆ ವಿನಂತಿಸಿದಾಗ, ಮಂಜೂರು ಮಾಡಲು ಉಂಟಾಗಿರುವ ತಾಂತ್ರಿಕ ತೊಂದರೆಗಳ ಕುರಿತು ತಿಳಿಸಿದರು.
ಗ್ರಾಮದ ಕೃಪಾಕ್ಷ ಕೋಟ್ಯಾನ್, ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮತ್ತು ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು. ಸರೋಜಮ್ಮ ಮಣಿ, ಚಂದು, ನಿವೇಶನ ಇಲ್ಲದೆ ಮನೆ ಕಟ್ಟಲು ಸಾಧ್ಯವಾಗಿಲ್ಲ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ, ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಮಂಜುನಾಥ್, ಗ್ರಾಮದಲ್ಲಿ ಹೈ ಮಾಸ್ಟ್ ದೀಪ ಹಾಕಬೇಕು ಎಂದರು. ವೃದ್ಧೆ ಮುತ್ತಮ್ಮ, ಮಳೆಗಾಲದಲ್ಲಿ ತಮ್ಮ ಮನೆಯ ಬಳಿ ಉಂಟಾಗುವ ಭೂಕುಸಿತಕ್ಕೆ ತಡೆಗೋಡೆ ನಿರ್ಮಾಣ ಮಾಡುವಂತೆ ಕೋರಿದರು.
ಗಾಳಿಗಂಡಿ ವಾರ್ಡ್ನ ಅಭಿ, ಮತ್ತು ಬಾಬರ್ ಪಾಷಾ, ರಸ್ತೆಗೆ ಹಣ ಮಂಜೂರು ಆಗಿ ಕಾಮಗಾರಿ ಪ್ರಾರಂಭವಾಗಿದ್ದು 10 ಮೀಟರ್ ರಸ್ತೆ ಬಾಕಿ ಇದೆ. ಅದನ್ನು ಪೂರ್ಣಗೊಳಿಸಬೇಕು ಎಂದರು.
ಸಂತೆ ಮೈದಾನ ವಾರ್ಡ್ಗೆ ₹50 ಲಕ್ಷ ಅನುದಾನ ಒದಗಿಸಿದ್ದಕ್ಕಾಗಿ ಮತ್ತು ರಸ್ತೆ ಮಾಡಲು ಅನುದಾನ ಮೀಸಲಿಟ್ಟಿದ್ದಕ್ಕಾಗಿ ಗದ್ದೆ ಲೇಔಟ್ ನಿವಾಸಿಗಳು ಮೊಹಮ್ಮದ್ ಖಾನ್ ನೇತೃತ್ವದಲ್ಲಿ ಶಾಸಕಿಯನ್ನು ಸನ್ಮಾನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ಕೆಳಗೂರು ಪೂರ್ಣೇಶ್, ಕಾರ್ಯದರ್ಶಿ ರವಿಚಂದ್ರ, ಅನುಪ್ ಗೌಡ, ಎ.ಯು ಇಬ್ರಾಹಿಂ, ಅಚ್ಚು ಹಸೈನರ್, ಎ.ಟಿ. ಮಹೇಶ್, ಮೈದಿನ್ ಕುಟ್ಟಿ, ಬೂತ್ ಅಧ್ಯಕ್ಷ ಜೀವನ್, ಮಮತಾ, ತೀರ್ಥ ಕುಮಾರ್, ಜುನೈಡ್, ಕರವೇ ಅಧ್ಯಕ್ಷ ಮಹಮ್ಮದ್ ಅಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.