ಶೃಂಗೇರಿ: ಶೃಂಗೇರಿ ಪಟ್ಟಣ ಪಂಚಾಯಿತಿ ಸಾರ್ವಜನಿಕ ಮಹಾ ಗಣಪತಿ ಸೇವಾ ಸಮಿತಿಯ 63ನೇ ಗಣೇಶೋತ್ಸವ ಸಂಭ್ರಮ ಶನಿವಾರ ರಾತ್ರಿ ಪೂರ್ಣಗೊಂಡಿತು.
ಗಣಪತಿ ವಿಸರ್ಜನಾ ಮೆರವಣಿಗೆಗೆ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಚಾಲನೆ ನೀಡಿದರು. ಗಾನ ವೈಭವದೊಂದಿಗೆ ನಗರದ ನಡೆದ ಶೋಭಾಯಾತ್ರೆಯ ಬಳಿಕ ಮಹಾಗಣಪತಿಯನ್ನು ತುಂಗಾನದಿಯಲ್ಲಿ ವಿಸರ್ಜಿಸಲಾಯಿತು. ಪಟ್ಟಣ ಪಂಚಾಯಿತಿ, ಮಹಾಗಣಪತಿ ಸೇವಾಸಮಿತಿಯ, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಅದ್ಧೂರಿ ಮೆರವಣಿಗೆ
ಚಿಕ್ಕಮಗಳೂರು: ಹಿಂದೂ ಮಹಾಗಣಪತಿ ಸೇವಾ ಸಂಘದ ವತಿಯಿಂದ ಬಸವನಹಳ್ಳಿಯ ಓಂಕಾರೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಶನಿವಾರ ಮೆರವಣಿಗೆಯಲ್ಲಿ ಒಯ್ದು ವಿಸರ್ಜನೆ ಮಾಡಲಾಯಿತು.
ಮಧ್ಯಾಹ್ನ 3.45ರ ಹೊತ್ತಿಗೆ ಪುಷ್ಪಾಲಂಕೃತ ಟ್ರಾಕ್ಟರ್ನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಾದ್ಯ ಮೇಳ, ಡಿ.ಜೆ ಸಂಗೀತದ ಮೆರುಗಿನಲ್ಲಿ ಮೆರವಣಿಗೆ ಸಾಗಿತು.ಯುವಜನರು ಡಿಜೆ ಸಪ್ಪಳಕ್ಕೆ ನರ್ತಿಸಿ ಸಂಭ್ರಮಿಸಿದರು. ವಾಹನವೊಂದರಲ್ಲಿ ಸಾವರ್ಕರ್ ಭಾವಚಿತ್ರವನ್ನು ಒಯ್ಯಲಾಯಿತು. ಪೊಲೀಸ್ ಭದ್ರತೆಯಲ್ಲಿ ಸಾಗಿತು. ಕಾಫಿನಾಡು ಚಂದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯು ಮಲ್ಲಂದೂರು ರಸ್ತೆ, ವಿಜಯಪುರ ಬಡಾವಣೆ, ಡಿಎಸಿಜಿ ಪಾಲಿಟೆಕ್ನಿಕ್ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಹಾದು ದಂಟರಮಕ್ಕಿ ಕೆರೆ ತಲುಪಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.