ಮೂಡಿಗೆರೆ: ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯನ್ನು ಗ್ರಾಮದ ಯುವಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿ ಆಕರ್ಷಕವಾಗಿ ಸಿಂಗರಿಸಿದ್ದಾರೆ.
‘ಸರ್ಕಾರಿ ಶಾಲೆ ಉಳಿಸಬೇಕು, ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಬೇಕು, ಕನ್ನಡ ಭಾಷೆಯನ್ನು ಉಳಿಸಿ –ಬೆಳೆಸಬೇಕು’ ಎಂಬ ಧ್ಯೇಯದೊಂದಿಗೆ ‘ಗ್ರಾಮದ ಹುಡುಗರು ವಾಟ್ಸ್ಆ್ಯಪ್ ಗ್ರೂಪ್’ನ ಸದಸ್ಯರು ಸಂಘ ಸಂಸ್ಥೆಗಳ, ದಾನಿಗಳ ನೆರವು ಪಡೆದು ಶಾಲೆಗೆ ಸುಣ್ಣ ಬಣ್ಣ ಬಳಿದು, ಗೋಡೆಗಳಲ್ಲಿ ಆಕರ್ಷಕ ಚಿತ್ತಾರ ರಚಿಸಿ, ಶಾಲೆಗೆ ವಿಶಿಷ್ಟ ರೂಪ ನೀಡಿದ್ದಾರೆ.
ವರ್ಣಚಿತ್ರ ಕಲಾವಿದ ಹುಬ್ಬಳ್ಳಿಯ ಯಲ್ಲಪ್ಪ ವೈ ಕುಂಬಾರ, ಚಿತ್ರದುರ್ಗದ ಶಿವಕುಮಾರ್ ಕಂದಿಗೆರೆ, ತುಮಕೂರಿನ ಕಾರ್ತಿಕ್ ಅವರ ತಂಡ ಹಾಗೂ ಕರ್ನಾಟಕ ಬಲಸೇನೆ ತಂಡದ ಸದಸ್ಯರು ಶಾಲೆಯ ಗೋಡೆ, ಆವರಣಗೋಡೆಯಲ್ಲಿ ವರ್ಣವೈಭವ ಮೂಡಿಸಿದ್ದಾರೆ. ಪಶ್ಚಿಮ ಘಟ್ಟಗಳ ಪರ್ವತ ಸಾಲು, ಪೂರ್ಣಚಂದ್ರ ತೇಜಸ್ವಿ, ದ.ರಾ. ಬೇಂದ್ರೆ, ರಾಜಕುಮಾರ್, ಭಗತ್ ಸಿಂಗ್ ಸೇರಿದಂತೆ ಅನೇಕ ಮಹನೀಯರ ಚಿತ್ರಗಳನ್ನು ಗೋಡೆಯ ಮೇಲೆ ಚಿತ್ರಿಸಿದ್ದು, ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲದೆ ಸುತ್ತಲಿನ ಗ್ರಾಮಗಳ ಜನರು ಶಾಲೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.