ಅಜ್ಜಂಪುರ: ತಾಲ್ಲೂಕಿನ ಗೆಜ್ಜೆಗೊಂಡನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಶನಿವಾರ ನೆರವೇರಿತು
ಜಾತ್ರಾ ಮಹೋತ್ಸವ ಪ್ರಯುಕ್ತ ಆಂಜನೇಯ ಸ್ವಾಮಿಯನ್ನು ವಿವಿಧ ಹೂವು- ಪತ್ರೆಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಲಾಯಿತು.
ಶ್ರೀಶೈಲ ಶಾಖಾ ಹಣ್ಣೆ ಮಠದ ಆವರಣದಿಂದ ಆಂಜನೇಯ ಸ್ವಾಮಿ ದೇವಾಲಯ ಆವರಣದವರೆಗೆ ಉತ್ಸವ ನಡೆಯಿತು.
ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ ಮಂಗಳವಾದ್ಯಗಳು ಗಮನ ಸೆಳೆದವು. ಬಳಿಕ ವಿವಿಧ ಹೂವು- ಕದಳಿಯಿಂದ ಅಲಂಕೃತಗೊಂಡಿದ್ದ ರಥದಲ್ಲಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು.
ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ದೇವರ ದರ್ಶನ ಪಡೆದು, ಹೂ ಹಣ್ಣು ಅರ್ಪಿಸಿದರು. ಭಕ್ತರು ಬಾಳೆಹಣ್ಣು, ನಿಂಬೆಹಣ್ಣು, ಪುರಿ ಉಂಡೆಯನ್ನು ರಥದ ಕಳಸದತ್ತ ಎಸೆದು ಸಂಭ್ರಮಿಸಿದರು. ಕೆಲವರು ರಥ ಎಳೆದು, ಜೈಕಾರ ಹಾಕಿದರು.
ರಥೋತ್ಸವ ಪ್ರಯುಕ್ತ ಶುಕ್ರವಾರ ಶ್ರೀಸ್ವಾಮಿ ದೇವಾಲಯದಲ್ಲಿ ಗಂಗಾ ಪೂಜೆ, ಗಣಪತಿ ಪೂಜೆ, ನವಗ್ರಹ ಪೂಜೆ, ಅಷ್ಟಲಕ್ಷ್ಮಿ ಪೂಜೆ, ಅಷ್ಟದಿಕ್ಪಾಲಕ ಪೂಜೆ ನೆರವೇರಿಸಲಾಯಿತು. ಸೊಲ್ಲಾಪುರದ ಗುರು ಸಿದ್ದರಾಮೇಶ್ವರ ಸ್ವಾಮಿ ಹೂವಿನ ಉತ್ಸವ ನಡೆಯಿತು. ಕಾಶಿ ವಿಶ್ವನಾಥ ದೇವಾಲಯ ಅರ್ಚಕರಿಂದ ಸನಾತನ ಹಿಂದೂ ಧರ್ಮದ ಕಾಶಿ ಗಂಗಾವತಿ ಕಾರ್ಯಕ್ರಮ ನಡೆಯಿತು.
ಶ್ರೀಶೈಲ ಶಾಖಾ ಹಣ್ಣೆ ಮಠದ ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಕೈಂಕರ್ಯದ ನೇತೃತ್ವ ವಹಿಸಿದ್ದರು.
ಗ್ರಾಮದ ಆಂಜನೇಯ ಸ್ವಾಮಿ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.