ಚಿಕ್ಕಮಗಳೂರು: ‘ತಾಲ್ಲೂಕಿನ ಇಂದಾವರ ಭಾಗದಲ್ಲಿ ವಸತಿ ಬಡಾವಣೆ ನಿರ್ಮಾಣ ನಿಟ್ಟಿನಲ್ಲಿ ಗ್ರಾಮದ ರೈತರೊಂದಿಗೆ ಚರ್ಚಿಸಿದ್ದು, ಉತ್ತಮ ಸಕರಾತ್ಮಕ ಸ್ಪಂದನೆ ವ್ಯಕ್ತವಾಗಿದೆ’ ಎಂದು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಅಧ್ಯಕ್ಷ ಆನಂದ್ ತಿಳಿಸಿದರು.
‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿ, ‘ಇಂದಾವರದಲ್ಲಿ ಶುಕ್ರವಾರ ರೈತರೊಂದಿಗೆ ಸಭೆ ನಡೆಯಿತು. ವಸತಿ ಬಡಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು. ರೈತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು’ ಎಂದು ತಿಳಿಸಿದರು.
‘ಜಮೀನು ನೀಡಲು ಹಲವು ರೈತರು ಒಲವು ತೋರಿದ್ದಾರೆ. ಸುಮಾರು 250 ಎಕರೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲಿ ಸಿಡಿಎ ಸಭೆ ನಿಗದಿಪಡಿಸಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
‘ಇಂದಾವರ ಗ್ರಾಮದವರೇ ಸಭೆ ಏರ್ಪಾಡಿಸಿದ್ದರು. ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರಿಂದ ಒಪ್ಪಿಗೆ ವ್ಯಕ್ತವಾದರೆ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಸಿಡಿಎ ಆಯುಕ್ತ ಬಿ.ಸಿ.ಬಸವರಾಜು ತಿಳಿಸಿದರು.
‘ಕಾಫಿ, ಅಡಿಕೆ, ಸಿಲ್ವರ್ ಸಹಿತ ಎಲ್ಲ ಗಿಡ, ಬೆಳೆ, ಜಾಗಕ್ಕೆ ತಕ್ಕ ಪರಿಹಾರ ಒದಗಿಸಬೇಕು. ರೈತರಿಗೆ ಅನುಕೂಲ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದೇವೆ ಎಂದು ಗ್ರಾಮಸ್ಥ ಯತೀಶ್ ತಿಳಿಸಿದರು.
ಸಿಡಿಎ ಸದಸ್ಯರಾದ ಲೋಕೇಶ್, ವಿರೂಪಾಕ್ಷ, ಗ್ರಾಮಸ್ಥರಾದ ಲೋಕೇಶ್, ರೇವಣ್ಣಗೌಡ ,ಚಂದ್ರಶೇಖರ್, ಸುರೇಶ್, ಪೂರ್ಣೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.