
ಜಯಪುರ(ಬಾಳೆಹೊನ್ನೂರು): ‘ಜಗತ್ತಿನಲ್ಲೇ ಅತ್ಯಂತ ಮೌಲ್ಯುಯುತವಾದ ಸಂಸ್ಕೃತಿ ನಮ್ಮ ದೇಶದ್ದು. ಒಂದು ದೇಶದ ಆಧ್ಯಾತ್ಮಿಕ, ಭೌಗೋಳಿಕ ಮೌಲ್ಯಗಳು ಸಮಗ್ರವಾಗಿ ವಿಕಾಸವಾಗುತ್ತಾ ತಲಮಾರಿನಿಂದ ತಲೆಮಾರಿಗೆ ಸಾಗುತ್ತಾ ಜನ ಮಾನಸದಲ್ಲಿ ನಲೆ ನಿಂತು ಅಭಿವ್ಯಕ್ತವಾಗುವುದೇ ಸಂಸ್ಕೃತಿ’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಕೂಳೂರಿನಲ್ಲಿ ಭಾನುವಾರ ಕೊಪ್ಪ ತಾಲ್ಲೂಕು ಸಮಿತಿ ಜಯಪುರ ಮಂಡಲದ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ‘ಭಾರತೀಯ ಸಂಸ್ಕೃತಿಯಲ್ಲಿ ಅನಾಧಿಕಾಲದಿಂದಲೂ ಏಕ ದೇವರ ಬಹುರೂಪ ಆರಾದನೆ ಕಾಣುತ್ತೇವೆ. ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಮಾತ್ರ ವಿಚಾರಕ್ಕೆ, ವಿಮರ್ಶಗೆ, ಚಿಂತನೆಗೆ ಮುಕ್ತವಾದ ಅವಕಾಶ ನೀಡಿದೆ. ಎಲ್ಲಿ ಚಿಂತನೆಗೆ ವಿಮರ್ಶೆಗೆ ಅವಕಾಶ ಇರುತ್ತದೋ ಅಲ್ಲಿ ಸಹಜವಾಗಿ ಬೇರೆ ಬೇರೆ ವಿಚಾರಧಾರೆಗಳು ಚಿಂತನೆಗಳು ಬೆಳೆಯುತ್ತದೆ’ ಎಂದರು.
ಜಗತ್ತಿನಲ್ಲಿ ಸತ್ಯ ಒಂದೇ ಮಾರ್ಗಗಳು ಆನೇಕ ಎಂಬುದು ನಮ್ಮ ಸಂಸ್ಕೃತಿಯಾದರೇ, ಸತ್ಯ ಒಂದೇ ಮಾರ್ಗವೂ ಕೇವಲ ಒಂದೇ ಎಂಬುದು ವಿದೇಶಿ ಸಂಸ್ಕೃತಿಯಾಗಿದೆ. ಶೈವ, ವೈಷ್ಣವರು, ಲಿಂಗಾಯಿತರು, ಜೈನ, ಬೌದ್ಧ, ಶಾಕ್ತರು, ವೈಧಿಕರು, ಆಗಮಿಕರು, ಸಿಖ್ಕರ ಸಂಪ್ರದಾಯದ ಸಂಸ್ಕೃತಿ ಈ ಮಣ್ಣಿನಲ್ಲಿ ಹುಟ್ಟಿದ್ದು ಅದರ ತಾಯಿ ಬೇರು ಭಾರತದಲ್ಲಿದೆ. ಆದರೆ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರದ್ದು ಭಾರತೀಯ ಸಂಸ್ಕೃತಿ ಅಲ್ಲ. ಅವರು ಪಾಲನೆ ಮಾಡುತ್ತಿರುವುದು ವಿದೇಶಿ ಸಂಸ್ಕೃತಿ. ಆನಾದಿ ಕಾಲದಿಂದಲೂ ವಾಸ ಮಾಡುತ್ತಿರುವ ಅವರು ಭಾರತೀಯರೆ ಆಗಿದ್ದಾರೆ. ಅವರ ನಂಬಿಕೆಯ ಶ್ರದ್ಧಾ ಕೇಂದ್ರ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿದೆ ಎಂದು ಅವರು ಹೇಳಿದರು.
ಕಾರ್ಕಳದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಿ, ‘ರಾಷ್ಟ್ರ ಕಾರ್ಯವನ್ನು ಏಕ ರೀತಿಯಿಂದ ಮಾಡಬೇಕು ಎಂಬುದನ್ನು ಕಲಿಸಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಮಾಜ ಕಟ್ಟಿದ ಹಿರಿಯರ ದಾರಿಯಲ್ಲಿ ನಾವು ನಡೆಯಬೇಕು. ಮಕ್ಕಳನ್ನು ಕನಿಷ್ಠ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ, ಹಿರಿಯರನ್ನು ಗೌರವಿಸುವ ಮೌಲ್ಯಯುತವಾದ ಸಂಸ್ಕಾರ ಬೋಧಿಸುವ ಮೂಲಕ ಯುವಜನಾಂಗವನ್ನು ಜಾಗೃತಗೊಳಿಸಬೇಕು’ ಎಂದರು.
ಕೊಪ್ಪ ರಸ್ತೆಯ ವರ್ತಕಲ್ ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣದ ಮೂಲಕ ಮಕ್ಕಿಕೊಪ್ಪದವರೆಗೆ ನೂರಾರು ವಾಹನಗಳು, ಎರಡು ಸಾವಿರಕ್ಕೂ ಅಧಿಕ ಜನ ಮೆರವಣಿಗೆ ಮೂಲಕ ಸಾಗಿದರು. ಮಕ್ಕಳು ದೇವರ, ಛದ್ಮ ವೇಷ ಧರಿಸಿ ಗಮನ ಸೆಳೆದರು.
ಎಚ್.ಆರ್. ರಂಗನಾಥ್, ಮಳಿಗೆ ಚಂದ್ರಶೇಖರ್, ಗಣೇಶ ಶಾಸ್ತ್ರೀ, ಗಜೇಂದ್ರ, ನೂತನ್ ಕ್ಲಾತ್ ಸ್ಟೋರ್ನ ನರೇಂದ್ರ, ಆರ್.ಎಸ್.ಎಸ್ನ ಜಿಲ್ಲಾ ಮಾರ್ಗದರ್ಶಕ ಟಿ.ಕೆ. ನಾರಾಯಣ, ಕೊಪ್ಪದ ಸುಬ್ರಹ್ಮಣ್ಯ ಶೆಟ್ಟಿ, ಹರಿಹರಪುರ ಪ್ರಬೋದಿನಿ ಗುರುಕುಲದ ಉಮೇಶ್, ಸುಧಾಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.