ಚಿಕ್ಕಮಗಳೂರು: ‘ಇನ್ನೇನು ಎಂಜಿನಿಯರಿಂಗ್ ಮುಗಿಸಿ ಬದುಕಿಗೆ ಆಧಾರವಾಗಲಿದ್ದಾನೆ ಎಂದು ಕನಸು ಕಂಡಿದ್ದೆವು. ಅಷ್ಟರಲ್ಲಿ ಈ ರೀತಿಯಾಗಿದೆ...’
ಹಾಸನದ ಮೊಸಳೆ ಹೊಸಹಳ್ಳಿಯಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಾಲ್ಲೂಕಿನ ಮಾಣೇನಹಳ್ಳಿ ಗ್ರಾಮದ ಪೋಷಕರು ಶನಿವಾರ ಕಣ್ಣೀರಿಟ್ಟರು. ಮಾಣೇನಹಳ್ಳಿಯ ರವೀಶ್–ಲತಾ ದಂಪತಿಯ ಹಿರಿಯ ಮಗ ಸುರೇಶ್ (19) ಅವಘಡದಲ್ಲಿ ಮೃತಪಟ್ಟಿದ್ದಾರೆ.
ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುರೇಶ್, ಮೊಸಳೆ ಹೊಸಹಳ್ಳಿ ಸಮೀಪದ ವಸತಿನಿಲಯದಲ್ಲಿ ತಂಗಿದ್ದರು. ಶುಕ್ರವಾರ ಸಂಜೆ ಊಟದ ನಂತರ ಸ್ನೇಹಿತರ ಜತೆ ಗಣಪತಿ ವಿಸರ್ಜನೆ ಮೆರವಣಿಗೆ ನೋಡಲು ತೆರಳಿದ್ದರು.
ಮೃತದೇಹವನ್ನು ಶನಿವಾರ ಮಾಣೇನಹಳ್ಳಿಗೆ ತರಲಾಯಿತು. ಈ ವೇಳೆ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು, ಸಂಬಂಧಿಕರ ಕಣ್ಣೀರಿನ ನಡುವೆ ಅಂತ್ಯಕ್ರಿಯೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.