ಕಳಸ (ಚಿಕ್ಕಮಗಳೂರು ಜಿಲ್ಲೆ): ‘ಕತ್ತಿ ಹಿಡಿದುಕೊಂಡು ರಾಮನ ಹೆಸರು ಉಳಿಸಲು ಸಾಧ್ಯವೇ? ಹಿಂದೂ ಮುಸ್ಲಿಮರ ಮಧ್ಯೆ ದ್ವೇಷ ಮೂಡಿಸಿ ಮತ ಗಳಿಸುವ ಹುನ್ನಾರವನ್ನು ಯಾರೂ ಕ್ಷಮಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಪಟ್ಟಣದ ಭದ್ರಾನದಿ ತೀರದಲ್ಲಿ ಸೋಮವಾರ ಜೆಡಿಎಸ್ ಜನತಾ ಜಲಧಾರೆ ಯಾತ್ರೆಯಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ರಾಮನ ಹೆಸರು ಹೇಳಿ ಅಧಿಕಾರ ಹಿಡಿದವರು ರಾವಣ ರಾಜ್ಯ ಮಾಡಲು ಹೊರಟಿದ್ದಾರೆ. ಇದರಿಂದ ಜನರ ಬದುಕು ಹದಗೆಡುತ್ತಿದೆ. ಸಮಾಜದ ಶಾಂತಿ ಕದಡುತ್ತಿದೆ ಎಂಬ ಪರಿಜ್ಞಾನ ಸರ್ಕಾರಕ್ಕೆ ಇಲ್ಲವೇ?’ ಎಂದು ಅವರು ಪ್ರಶ್ನಿಸಿದರು.
‘ಬಿಜೆಪಿ 150 ಸ್ಥಾನ ಗಳಿಸಲು ರಾಜ್ಯದ ಭಾವೈಕ್ಯತೆ ಕದಡಬಾರದು. ಬಿಜೆಪಿ ಮುಖಂಡರನ್ನು ಜೈಲಿಗೆ ಕಳಿಸುವ ಏಕಮಾತ್ರ ಉದ್ದೇಶ ಹೊಂದಿದ ಕಾಂಗ್ರೆಸ್ ಸಮಾಜದ ಸ್ವಾಸ್ಥ್ಯ ಮರೆತಿದೆ. ನಮ್ಮ ರಾಜ್ಯದ ಸಾಮರಸ್ಯ ಕೆಡಿಸುವ ಯತ್ನವನ್ನು ಕಂಡು ನಾವು ಸುಮ್ಮನೆ ಇರಲು ಆಗುತ್ತದೆಯೇ? ಮುಖ್ಯಮಂತ್ರಿ ತುರ್ತಾಗಿ ನಾಡಿನ ಎಲ್ಲ ಧರ್ಮಗಳ ಗುರುಗಳು, ಮಠಾಧೀಶರು, ಧಾರ್ಮಿಕ ಮುಖಂಡರ ಸಭೆ ನಡೆಸಿ ರಾಜ್ಯದಲ್ಲಿ ಸಾಮರಸ್ಯ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು’ ಎಂದೂ ಅವರು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.