ಚಿಕ್ಕಮಗಳೂರು:ಹಿಂದೂ ಮಹಾಸಭಾ ವತಿಯಿಂದ ಚೌತಿ ಹಬ್ಬದ ನಿಮಿತ್ತ ನಗರದ ಓಂಕಾರೇಶ್ವರ ದೇಗುಲ ಆವರಣದಲ್ಲಿ ಸ್ಥಾಪಿಸಿದ್ದ ಗೌರಿ–ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಗುರುವಾರ ನಡೆಯಿತು.
ಸಂಜೆ 4.30ವೇಳೆಗೆ ಮೆರವಣಿಗೆ ಆರಂಭವಾಯಿತು. ವಿಜಯಪುರ ಮುಖ್ಯರಸ್ತೆ, ತಿಲಕ್ ಪಾರ್ಕ್ ರಸ್ತೆ, ರಾಘವೇಂದ್ರ ಸ್ವಾಮಿ ರಸ್ತೆ, ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮಾರ್ಗದ ಮಧ್ಯೆ ಕೆಲ ಅಂಗಡಿಯವರು ಜನರಿಗೆ ಪಾನಕ, ಪ್ರಸಾದ ವಿತರಿಸಿದರು. ಕೆಲ ಭಕ್ತರು ದೊಡ್ಡ ಹೂವಿನ ಹಾರಗಳನ್ನು ಗಣೇಶ ಮೂರ್ತಿಗೆ ಸಮರ್ಪಿಸಿದರು.
ನಾದಸ್ವರ, ಗೊಂಬೆ ಕುಣಿತಗಳು ಮೆರವಣಿಗೆಗೆ ಸಾಂಪ್ರದಾಯಿಕ ಮೆರಗು ನೀಡಿದ್ದವು. ಹಿಂದೂ ಮಹಾಸಭಾದ ಸ್ವಯಂ ಸೇವಕರು ಬಿಳಿ ಅಂಗಿ, ಪಂಚೆ, ಕೇಸರಿ ಬಣ್ಣದ ಸರ್ದಾರ್ ಪೇಟ ಧರಿಸಿ ಮೆರವಣಿಗೆಯಲ್ಲಿ ಸಾಗಿ ಎಲ್ಲರ ಗಮನ ಸೆಳೆದರು. ನಾಸಿಕ್ ಡೋಲ್ ಶಬ್ಧಕ್ಕೆ ಹೆಜ್ಜೆ ಹಾಕುವವರ ಸಂಖ್ಯೆ ಕಡಿಮೆ ಇತ್ತು. ಡಿ.ಜೆ ಶಬ್ದಕ್ಕೆ ಯುವಕರು, ಯುವತಿಯರು, ಶಾಲಾ ವಿದ್ಯಾರ್ಥಿಗಳು ದಂಡು ದಂಡಾಗಿ ಕುಣಿದು ಕುಪ್ಪಳಿಸುತ್ತಿದ್ದರು.
ಮಂಜಾಗ್ರತೆಯಾಗಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.