ADVERTISEMENT

‘ರೈತರ ಆತ್ಮಹತ್ಯೆಗೆ ತಡೆಗೆ ಖಚಿತ ಬೆಲೆ ನೀತಿ ಜಾರಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:24 IST
Last Updated 23 ಫೆಬ್ರುವರಿ 2019, 13:24 IST
ಸಾಹಿತಿ ಚಟ್ನಳ್ಳಿ ಮಹೇಶ್‌ ಮಾತನಾಡಿದರು. ಡಾ.ಜಗದೀಶ್‌, ಆದಿಚುಂಚನಗಿರಿ ವಿ.ವಿ ಕುಲಸಚಿವ ಪ್ರೊ.ಸುಬ್ಬರಾಯ, ಡಾ.ವೆಂಕಟೇಶ್‌, ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಚಂದ್ರಶೇಖರ್‌, ಸಂಘದ ಮಾಜಿ ಅಧ್ಯಕ್ಷ ಡಾ.ಅಜಿತ್‌ಭಿಡೆ, ಡಾ.ಮಹೇಶ್‌ಗೌಡ ವೇದಿಕೆಯಲ್ಲಿದ್ದರು.
ಸಾಹಿತಿ ಚಟ್ನಳ್ಳಿ ಮಹೇಶ್‌ ಮಾತನಾಡಿದರು. ಡಾ.ಜಗದೀಶ್‌, ಆದಿಚುಂಚನಗಿರಿ ವಿ.ವಿ ಕುಲಸಚಿವ ಪ್ರೊ.ಸುಬ್ಬರಾಯ, ಡಾ.ವೆಂಕಟೇಶ್‌, ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಚಂದ್ರಶೇಖರ್‌, ಸಂಘದ ಮಾಜಿ ಅಧ್ಯಕ್ಷ ಡಾ.ಅಜಿತ್‌ಭಿಡೆ, ಡಾ.ಮಹೇಶ್‌ಗೌಡ ವೇದಿಕೆಯಲ್ಲಿದ್ದರು.   

ಚಿಕ್ಕಮಗಳೂರು: ಸರ್ಕಾರವು ಕೃಷಿ ಉತ್ಪನ್ನಗಳಿಗೆ ಖಚಿತವಾದ ಬೆಲೆ ನೀತಿ ಜಾರಿಗೊಳಿಸಿದರೆ, ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದರೆ ರೈತರ ಆತ್ಮಹತ್ಯೆ ಶೇ 90 ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಸಾಹಿತಿ ಚಟ್ನಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.

ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಘಟಕದ ವತಿಯಿಂದ ನಗರದ ಎಐಟಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ‘ರೈತರ ಆತ್ಮಹತ್ಯೆಗೆ ಕಾರಣ ಮತ್ತು ಪರಿಹಾರ’ ಕುರಿತು ಮಾತನಾಡಿದರು. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಇವೆಲ್ಲವೂ ರೈತರನ್ನು ಬಾಧಿಸುತ್ತವೆ. ರೈತ ಸಮುದಾಯದ ಸಂಕಷ್ಟಗಳಿಗೆ ನಿಸರ್ಗದ ಸಿಟ್ಟಿನ ಜತೆಗೆ ಪ್ರಭುತ್ವ ಮಾಡುತ್ತಿರುವವರ ಅನ್ಯಾಯ ಕಾರಣ ಎಂದು ವಿಶ್ಲೇಷಿಸಿದರು.

‘ರೈತರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಭುತ್ವ ಎಷ್ಟು ಆಸ್ಥೆ ವಹಿಸಿದೆ ಎಂದು ಚಿಂತಿಸಬೇಕಿದೆ. ಜಲಕ್ಷಾಮ ರೈತರನ್ನು ವಿಪರೀತವಾಗಿ ಕಾಡುತ್ತಿದೆ. ಕೊಳವೆಬಾವಿ ನಂಬಿಕೊಂಡು ರೈತರು ತೊಂದರೆಗೆ ಸಿಲುಕಿದ್ದಾರೆ. ರೈತರು ತ್ರಿಶಂಕು ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಕೃಷಿ ಸಾಮೂಹಿಕ ಪ್ರಜ್ಞೆ. ಈ ಸಾಮೂಹಿಕ ಪ್ರಜ್ಞೆ ‍ಪೆಟ್ಟು ಬಿದ್ದಿದೆ. ಕಷ್ಟಕ್ಕೆ ಸ್ಪಂದಿಸುವವರು ಯಾರೂ ಇಲ್ಲ ಎಂಬ ವೇದನೆ ರೈತರನ್ನು ಕಾಡುತ್ತಿದೆ’ ಎಂದು ಹೇಳಿದರು.

ADVERTISEMENT

ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸಬೇಕು. ಕನಿಷ್ಠ ಬೆಲೆಗಿಂತ ಕಡಿಮೆಗೆ ಮಾರಾಟವಾಗದಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸಬೇಕು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಹೊಲ, ಜಮೀನು, ತೋಟಗಳಿಗೆ ಕಳಿಸಿ ರೈತರಿಗೆ ಮಾರ್ಗದರ್ಶನ ನೀಡುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಉತ್ಪನ್ನ ಮಾರಾಟದಿಂದ ಉತ್ಪಾದಕರಿಗೆ ಲಾಭದ ಗರಿಷ್ಠ ಪಾಲು ಸಿಗುವಂತಾಗಬೇಕು. ದಲ್ಲಾಳಿಗಳು, ಮಧ್ಯವರ್ತಿಗಳು ಹೆಚ್ಚು ಲಾಭ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಉತ್ಪಾದಕರಿಗೆ ಲಾಭವಾಗುವಂಥ ಬೆಲೆ ನೀತಿಯನ್ನು ಜಾರಿಗೊಳಿಸಿದರೆ, ಅದು ರೈತರಿಗೆ ಸರ್ಕಾರು ನೀಡುವ ದೊಡ್ಡ ಕೊಡುಗೆ ಎಂದರು.

ಕೃಷಿಗೆ ಕಾರ್ಯಕ್ರಮಗಳಲ್ಲಿ ಬಹಳಷ್ಟು ಯಾಂತ್ರೀಕೃತವಾಗಿ ನಡೆಯುತ್ತವೆ. ಇದು ಸರಿಯಲ್ಲ. ರೈತರೊಂದಿಗೆ ಸಂವಾದಗಳನ್ನು ಏರ್ಪಡಿಸಬೇಕು. ರೈತರ ಸಮಸ್ಯೆಗಳನ್ನು ಆಲಿಸಬೇಕು. ಅವುಗಳಿಗೆ ಪರಿಹಾರ ರೂಪಿಸಬೇಕು ಎಂದು ಹೇಳಿದರು.

ಕೃಷಿ ಐಷಾರಾಮವನ್ನು ಕೊಡುವುದಿಲ್ಲ. ಅದು ನಮ್ಮ ಅಗತ್ಯ, ಆಸೆ ಪೂರೈಸುತ್ತದೆ. ದುರಾಸೆಯನ್ನಲ್ಲ. ರೈತರು ಧೃತಿಗೆಡಬಾರದು. ರೈತರು ಬೃಹತ್‌ ಉದ್ಯಮಿಗಳು, ಆಗರ್ಭ ಶ್ರೀಮಂತರೊಂದಿಗೆ ತಮ್ಮನ್ನ ಹೋಲಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಶೈಕ್ಷಣಿಕ ಪತ್ರಗಳು ಮರಣ ಪತ್ರಗಳಾಗುತ್ತಿವೆ. ಕೃಷಿ ಅರಿವಿಲ್ಲದವರು, ಅಂಗೈ ಅಗಲ ಜಮೀನು ಇಲ್ಲದವರು ಕೃಷಿ ಬಗ್ಗೆ ಪುಖಾನುಪುಂಖವಾಗಿ ಭಾಷಣ ಬಿಗಿಯುತ್ತಾರೆ. ಕೃಷಿಯಿಂದ ವಿಮುಖರಾಗಿ ಹಲವರು ನಗರಗಳಿಗೆ ವಲಸೆ ಹೋಗಿದ್ದಾರೆ. ಅಲ್ಲಿ ನೆಮ್ಮದಿ ಹುಡುಕುವುದರಲ್ಲಿ ತೊಡಗಿದ್ದಾರೆ. ನಗರಗಳ ಬದುಕು ಥಳಕು ಬಳಕು ಅಷ್ಟೇ. ನಮ್ಮ ಕೃಷಿಗೆ ಕಾಯಕಲ್ಪ ಸಿಗಬೇಕಾದರೆ ವಲಸೆ ಹೋಗಿರುವವರು ‍ವಾಪಸ್ ಬರಬೇಕು. ಕೃಷಿ ಚರಿತ್ರ ಪುನರಾವರ್ತನೆ ಆಗಬೇಕು ಎಂದು ಆಶಿಸಿದರು.

ಎಐಟಿ ಪ್ರಾಚಾರ್ಯ ಪ್ರೊ.ಜಯದೇವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.