ಕಡೂರು: ಬೇಸಿಗೆಯ ಆರಂಭದಲ್ಲೇ ತಾಪಮಾನ ಹೆಚ್ಚಳವಾಗಿರುವುದರಿಂದ ಅಡಿಕೆ ಮರಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.
5 ವರ್ಷಗಳ ಹಿಂದೆ ಸತತ 5 ವರ್ಷ ಬರಗಾಲವನ್ನು ಕಂಡ ತಾಲ್ಲೂಕಿನಲ್ಲಿ ತೆಂಗು ಮತ್ತು ಅಡಿಕೆ ಮರಗಳು ನೆಲಕಚ್ಚಿದ್ದವು. ಆ ನಂತರ ಸಮೃದ್ಧ ಮಳೆ ಸುರಿದು ಕೆರೆ ಕಟ್ಟೆ ತುಂಬಿದ್ದರಿಂದ ರೈತರು ಅಡಿಕೆ ಕೃಷಿಯತ್ತ ಚಿತ್ತ ನೆಟ್ಟಿದ್ದರು. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಕಳೆದ ವರ್ಷ ತಾಲ್ಲೂಕಿನಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ 18 ಲಕ್ಷಕ್ಕೂ ಹೆಚ್ಚು ಅಡಿಕೆ ಮರಗಳು ಇದ್ದವು. ಸಾಂಪ್ರದಾಯಿಕ ಪದ್ಧತಿಯನ್ನು ಮೀರಿ ಸಣ್ಣ ಪ್ರದೇಶಗಳಲ್ಲೂ ಕಂಗು ಎದ್ದು ನಿಂತಿವೆ.
ಅಡಿಕೆ ಮರಕ್ಕೆ ಸದಾ ನೀರು ಬೇಕೆಂದಿಲ್ಲ. ಆದರೆ ತಂಪು ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೆಲದಲ್ಲಿ ತೇವಾಂಶ ಇರುವುದು ಅಡಿಕೆ ಕೃಷಿಗೆ ಅಗತ್ಯ. ಇದಕ್ಕಾಗಿ ಬಹುತೇಕ ರೈತರು ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಈಗ ಬಿಸಿಲು ಹೆಚ್ಚಾಗಿ ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಕೊಳವೆ ಭಾವಿ ನೆಚ್ಚಿಕೊಂಡು ಅಡಿಕೆ ಹಾಕಿರುವ ರೈತರನ್ನು ಬರಗಾಲದ ಬೇಗೆ ತುಸು ಹೆಚ್ಚಾಗಿಯೇ ತಟ್ಟುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಅಡಿಕೆ ಹೀಚುಗಳು ಉದುರಲು ಆರಂಭವಾಗಿದೆ.
ಅಡಿಕೆ ಗಿಡಗಳನ್ನು ಉಳಿಸಲು ಹನಿ ನೀರಾವರಿ ವ್ಯವಸ್ಥೆಯಷ್ಟೆ ಸಾಲದು. ನೆಲಕ್ಕೆ ಮಲ್ಚಿಂಗ್ (ಮಚ್ಚಿಗೆ) ಮಾಡಬೇಕು. ಮರಗಳಿಂದ ಉದುರಿದ ಎಲೆ, ಗರಿ ಇತ್ಯಾದಿಗಳನ್ನು ಗಿಡದ ಬುಡದಲ್ಲಿ ಹಾಕಿದರೆ ತೇವಾಂಶ ಉಳಿಯುತ್ತದೆ. ಹಸಿರೆಲೆ ಮುಚ್ಚಿಗೆಯನ್ನು ಹಾಕುವುದರಿಂದ ನೈಸರ್ಗಿಕ ರಕ್ಷಣೆ ಸಿಗುತ್ತದೆ. ಆಗ ಗಿಡಗಳು ಬಾಡದೆ ಸುಡುಬಿಸಿಲನ್ನೂ ತಡೆದುಕೊಳ್ಳುವ ಶಕ್ತಿ ಪಡೆಯುತ್ತವೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್.
ಸೂಕ್ಷ್ಮಾಣು ಜೀವಿಗಳನ್ನು ವೃದ್ಧಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಬಿಸಿಲು ಹೆಚ್ಚಿದೆ ಎಂದು ಅತಿಯಾಗಿ ನೀರು ಕೊಡಬಾರದು. ಅದರಿಂದ ಅಡಿಕೆ ಮರಗಳಿಗೆ ಹಾನಿಯೇ ಹೆಚ್ಚು ಎಂದು ಅವರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.