ADVERTISEMENT

ಜಾನಪದ ಕಲೆ ರಕ್ಷಣೆ ಎಲ್ಲರ ಜವಾಬ್ದಾರಿ

ಅಂಟಿಗೆ ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮಕ್ಕೆ ಹರಿಹರಪುರ ಸ್ವಾಮೀಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 5:58 IST
Last Updated 23 ನವೆಂಬರ್ 2020, 5:58 IST
ಕೊಪ್ಪದ ನಾರ್ವೆಯಲ್ಲಿ ನಡೆದ ಅಂಟಿಗೆ ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮವನ್ನು ಹರಿಹರಪುರ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
ಕೊಪ್ಪದ ನಾರ್ವೆಯಲ್ಲಿ ನಡೆದ ಅಂಟಿಗೆ ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮವನ್ನು ಹರಿಹರಪುರ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.   

ಕೊಪ್ಪ: ‘ಅಂಟಿಗೆ ಪಿಂಟಿಗೆ ಜಾನಪದ ಕಲೆಯನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ. ಸಮಾಜದ ಕರ್ತವ್ಯ ವಾಗಿದೆ’ ಎಂದು ಹರಿಹರಪುರ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಾರ್ವೆಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸ್ವಯಂಪ್ರಕಾಶ ಸರಸ್ವತಿ ಪ್ರೌಢಶಾಲೆ ಆಡಳಿತ ಮಂಡಳಿ ವತಿಯಿಂದ ಶನಿವಾರ ಆಯೋಜಿಸಿದ್ದ 2ನೇ ವರ್ಷದ ಶೃಂಗೇರಿ ಕ್ಷೇತ್ರ ಮಟ್ಟದ ಆಹ್ವಾನಿತ ತಂಡಗಳ ಅಂಟಿಗೆ ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನಪದ ಸಾಹಿತ್ಯ ಜನಸಾಮಾನ್ಯರ ಆಡುಭಾಷೆ, ಅನಾದಿ ಕಾಲದಿಂದಲೂ ನಮ್ಮ ಸಮಾಜದ ಮೌಲ್ಯಗಳನ್ನು, ರೀತಿ ನೀತಿಗಳನ್ನು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಗಳನ್ನು ನಮಗೆ ತಿಳಿಸಿಕೊಡುತ್ತಿವೆ. ಜನರ ಜೀವನದ ಅನುಭವಗಳೇ ಜಾನಪದ’ ಎಂದರು.

ADVERTISEMENT

‘ಬದುಕಿನಲ್ಲಿ ಎಷ್ಟೇ ಕಷ್ಟ, ನಷ್ಟ ಬಂದರೂ ಭರವಸೆ ಕಳೆದುಕೊಳ್ಳ ಬಾರದು. ಕಷ್ಟ ಬಂದಾಗ ತಾಳ್ಮೆ, ಧೈರ್ಯ ಬೇಕು. ಹಿರಿಯರ ಬದುಕಿನ ಹಾದಿಯನ್ನು ಅರಿತು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಸಹಾಯಕಾರಿಯಾಗಿದೆ. ಅಂಟಿಗೆ ಪಿಂಟಿಗೆಯಲ್ಲಿ ಬರುವ ಪ್ರತಿಯೊಂದು ಸಾಹಿತ್ಯಕ್ಕೂ ತತ್ವಯುತ ವಿಚಾರಗಳನ್ನು ಹೊಂದಿದೆ’ ಎಂದು ತಿಳಿಸಿದರು.

‘ಇಲ್ಲಿನ ಸ್ಪರ್ಧೆಗೆ ಭಾಗವಹಿಸಿದ ಕಲಾವಿದರು ಮಠದಲ್ಲಿ ಒಮ್ಮೆ ಬಂದು ಅಂಟಿಗೆ ಪಿಂಟಿಗೆ ಹಾಡು ಹೇಳಬೇಕು. ಮುಂದಿನ ದೀಪಾವಳಿಗೆ ನಮ್ಮ ಮಠದಲ್ಲಿ ಅದ್ಧೂರಿಯಾಗಿ ಅಂಟಿಗೆ ಪಿಂಟಿಗೆ ಕಾರ್ಯಕ್ರಮ ನಡೆಯುವಂತಾಗಲಿ’ ಎಂದು ಹೇಳಿದರು.

ಸಮಾರೋಪ ಸಮಾರಂಭ: ಸ್ಪರ್ಧೆಯ ತೀರ್ಪುಗಾರರಾಗಿ ಶಿಕ್ಷಣ ಇಲಾಖೆ ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಡಿ.ರವೀಂದ್ರ, ಜಿಲ್ಲಾ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಇದ್ದರು.

ಸಮಾರೋಪದಲ್ಲಿ ಮಾತನಾಡಿದ ಎಸ್.ಎಸ್.ವೆಂಕಟೇಶ್, ‘ಜಾನ ಪದರು ಕಟ್ಟಿಕೊಟ್ಟಂತಹ ಅಂಟಿಗೆ ಪಿಂಟಿಗೆಯಂತಹ ಜಾನಪದ ಕಲೆ ಮರೆಯಾ ಗುತ್ತಿರುವ ಪ್ರಸ್ತುತ ಸಂದರ್ಭ ದಲ್ಲಿ ಈ ಕಾರ್ಯಕ್ರಮ ಸಕಾಲಿಕವಾಗಿದೆ’ ಎಂದರು.

ಅಧ್ಯಕ್ಷತೆಯನ್ನು ಜಿನೇಶ್ ಇರ್ವ ತ್ತೂರು ವಹಿಸಿದ್ದರು. ಸ್ವಯಂಪ್ರಕಾಶ ಪ್ರೌಢಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷ ಓಣಿತೋಟ ರತ್ನಾಕರ್, ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್, ಖಜಾಂಚಿ ಕೆ.ಆರ್.ಚಂದ್ರಶೇಖರ್, ನಿರ್ದೇಶಕ ಗಿರೀಶ್, ದಾನಿ ಎಲ್.ಎಂ.ಪ್ರಕಾಶ್ ಕೌರಿ ಇದ್ದರು.

ವಿಜೇತ ತಂಡ: ಕೊಪ್ಪ ತಾಲ್ಲೂಕಿನ ಐದು ತಂಡಗಳು, ಶೃಂಗೇರಿ ತಾಲ್ಲೂಕಿನಿಂದ ಮೂರು ತಂಡಗಳು ಭಾಗವಹಿಸಿದ್ದವು. ಕೊಪ್ಪ ತಾಲ್ಲೂಕು ಅದ್ದಡ ಗ್ರಾಮದ ಹೆಚ್ಛೆಯ ಚೌಡೇಶ್ವರಿ ಕಲಾ ಬಳಗ(ಪ್ರಥಮ), ಶೃಂಗೇರಿ ತಾಲ್ಲೂಕು ಹುಲಿಸರದ ದುರ್ಗಾಪರಮೇಶ್ವರಿ ಕಲಾ ತಂಡ(ದ್ವಿತೀಯ), ಕೊಪ್ಪ ತಾಲ್ಲೂಕಿನ ಕುಂಚೂರಿನ ದುರ್ಗಾಪರಮೇಶ್ವರಿ ಕಲಾ ಬಳಗ ತೃತೀಯ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.