ಕಡೂರು: ‘ದುಷ್ಕರ್ಮಿಗಳು ಕಾರಿನ ಮೇಲೆ ‘ಕಿಲ್ ಯು, ಜಿಹಾದ್, ಎಕ್ಸ್ಎಕ್ಸ್ಎಕ್ಸ್...’ ಎಂದು ಮತ್ತು ಆಶ್ಲೀಲವಾಗಿ ಗೀಚಿದ್ದಾರೆ. ವಾಹನಕ್ಕೆ ಹಾನಿ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ‘ ಎಂದು ಕಡೂರಿನ ಧರ್ಮ ಜಾಗರಣ ಹಾಗೂರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಡಾ.ಶಶಿಧರ ಸಿಂದಿಗೆರೆ ಜಯಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ.
‘ಸೆ.24ರಂದು ರಾತ್ರಿ ಕೃತ್ಯ ಎಸಗಿದ್ದಾರೆ. ಬೀರೂರಿನ ಗಣಪತಿ ಪೆಂಡಾಲ್ನಲ್ಲಿ ಗಣೇಶೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಕಡೂರಿಗೆ ರಾತ್ರಿ 10.30ಕ್ಕೆ ವಾಪಸಾಗಿ ಮನೆ ಮುಂದೆ ಕಾರು ನಿಲ್ಲಿಸಿದ್ದೆ. ಮರುದಿನ (ಭಾನುವಾರ) ಬೆಳಿಗ್ಗೆ ನೋಡಿದಾಗ ಕಾರಿನ ನಾಲ್ಕೂ ಚಕ್ರಗಳ ಗಾಳಿ ತೆಗೆದಿರುವುದು, ಕಾರಿನ ಮೇಲೆ ಗೀಚಿರುವುದು (ಬಾನೆಟ್, ಬಲಭಾಗದ ಬಾಗಿಲ ಮೇಲೆ), ಹಾನಿ ಮಾಡಿರುವುದು ಕಂಡುಬಂದಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿರುವ ಅನುಮಾನ ಇದೆ. ಭದ್ರತೆ ಒದಗಿಸುವಂತೆ ಪೊಲೀಸರನ್ನು ಕೋರಿದ್ದೇನೆ‘ ಎಂದು ಡಾ. ಶಶಿಧರ ಸಿಂದಿಗೆರೆ ಜಯಣ್ಣ ತಿಳಿಸಿದರು.
‘ತನಿಖೆಗೆ ತಂಡ ರಚಿಸಲಾಗಿದೆ. ಕಿಡಿಗೇಡಿಗಳ ಪತ್ತೆ ನಿಟ್ಟಿನಲ್ಲಿ ಶೋಧ ಆರಂಭಿಸಿದ್ದೇವೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಕೆರೆಯಲ್ಲಿ ಶವ ಪತ್ತೆ
ಚಿಕ್ಕಮಗಳೂರು: ತಾಲ್ಲೂಕಿನ ಮೂಗ್ತಿಹಳ್ಳಿಯ ಬಳಿ ಮತ್ತಾವರ ಕೆರೆಯಲ್ಲಿ ಸೋಮವಾರ ಶವವೊಂದು ಪತ್ತೆಯಾಗಿದ್ದು, ಕಡೂರು ತಾಲ್ಲೂಕಿನ ಸಿರಬಡಗಿ ಗ್ರಾಮದ ಮಲ್ಲಿಕ್(45) ಎಂದ ಗುರುತಿಸಲಾಗಿದೆ.
‘ಸಿರಬಡಗಿಯ ಮಲ್ಲಿಕ್ ಕೆಲ ದಿನಗಳ ಹಿಂದೆ ಅಕ್ಕನ ಮನೆಗೆ ಬಂದಿದ್ದರು. ಕೆರೆಯಲ್ಲಿ ಅವರ ಶವ ಪತ್ತೆಯಾಗಿದೆ. ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.