ADVERTISEMENT

‘ಬಲಿಷ್ಠ ಭಾರತಕ್ಕೆ ಮೋದಿಯೇ ಸಾರಥಿ’

ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:19 IST
Last Updated 18 ಸೆಪ್ಟೆಂಬರ್ 2025, 4:19 IST
ಕಡೂರಿನ ಸಾಯಿಮಂದಿರ ಆವರಣದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಶ್ರಮದಾನದ ಮೂಲಕ ಸೇವಾ ಪಾಕ್ಷಿಕಕ್ಕೆ ಚಾಲನೆ ನೀಡಿದರು
ಕಡೂರಿನ ಸಾಯಿಮಂದಿರ ಆವರಣದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಶ್ರಮದಾನದ ಮೂಲಕ ಸೇವಾ ಪಾಕ್ಷಿಕಕ್ಕೆ ಚಾಲನೆ ನೀಡಿದರು   

ಕಡೂರು: ‘ಜಗತ್ತಿನಲ್ಲಿ ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ದೇಶವನ್ನು ಬಲಿಷ್ಠಗೊಳಿಸಿದ ಶ್ರೇಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.

ಪಟ್ಟಣದ ದತ್ತಾತ್ರಿ ಬಡಾವಣೆಯ ಸಾಯಿಮಂದಿರ ಮತ್ತು ಉದ್ಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಪ್ರಯುಕ್ತ ಬುಧವಾರ ಸೇವಾ ಪಾಕ್ಷಿಕಕ್ಕೆ ಸ್ವಚ್ಛತೆಯ ಶ್ರಮದಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತವನ್ನು ವಿಶ್ವಮಾನ್ಯ ಮಾಡುವಲ್ಲಿ ಮೋದಿಯವರ ಶ್ರಮ ಅಪಾರವಾಗಿದೆ. ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದಲೂ ಹಲವು ಸವಾಲುಗಳನ್ನು ಎದುರಿಸಿ ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ದೇಶ ಕಟ್ಟುವಲ್ಲಿ ತಮ್ಮದೇ ಆದ ಮಾದರಿ ರೂಪಿಸಿದವರು. ಪ್ರಧಾನಿಯಾದ ಬಳಿಕ ಜನಧನ್, ಫಸಲ್‌ ಬಿಮಾ ಯೋಜನೆ, ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ ಅಭಿಯಾನ, ಸ್ವಾವಲಂಬನೆಗಾಗಿ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಪಿ.ಎಂ ಕಿಸಾನ್ ಮೂಲಕ ಕೋಟ್ಯಂತರ ರೈತರಿಗೆ ನೆರವು, ತ್ರಿವಳಿ ತಲಾಖ್ ಮತ್ತು 370ನೇ ವಿಧಿ ರದ್ದತಿ ಮೂಲಕ ಅಲ್ಪಸಂಖ್ಯಾತರಲ್ಲಿ ಭರವಸೆ, 80 ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ, ಬೇಟಿ ಬಚಾವೊ ಬೇಟಿ ಪಡಾವೊ, ಉಜ್ವಲಾ ಯೋಜನೆಯ ಮೂಲಕ ಮಹಿಳೆಯರಿಗೆ ಗೌರವ ಹೀಗೆ ದೇಶದ ಎಲ್ಲ ವರ್ಗದ ಜನರಿಗೂ ತಲುಪುವಂತೆ ಕಾರ್ಯಕ್ರಮ ರೂಪಿಸಿ, ಸಂಕಷ್ಟದ ಸಮಯದಲ್ಲಿ ಸೈನಿಕರ ಆತ್ಮಗೌರವ ಎತ್ತಿ ಹಿಡಿಯಲು ಸರ್ಜಿಕಲ್ ಸ್ಟ್ರೈಕ್‌ ಆಪರೇಷನ್ ಸಿಂಧೂರಕ್ಕೆ ಬಲ ತುಂಬಿ ದೇಶವನ್ನು ಸಜ್ಜುಗೊಳಿಸಿದ ನಾಯಕ’ ಎಂದು ಬಣ್ಣಿಸಿದರು.

ADVERTISEMENT

ಅವಿರತ ಶ್ರಮ ಹಾಗೂ ವಿಶ್ರಾಂತಿ ಬಯಸದ ಮೋದಿಯವರಿಂದ ವಿದೇಶಗಳಲ್ಲಿ ಭಾರತ ಹಿರಿಮೆ ಹೆಚ್ಚಿದೆ. ವಿದೇಶಗಳ ಜತೆ ಅವರು ಬೆಸೆದ ಬಾಂಧವ್ಯದಿಂದ ವಿಶ್ವವೇ ಭಾರತವನ್ನು ಗೌರವ ಭಾವದಿಂದ ನೋಡುತ್ತಿದೆ. ಅವರ 75ನೇ ಜನ್ಮದಿನಾಚರಣೆ ಸಲುವಾಗಿ ತಾಲ್ಲೂಕಿನಲ್ಲಿ ಸೆ. 17ರಿಂದ ಅ. 2ರವರೆಗೆ ಸೇವಾ ಪಾಕ್ಷಿಕ ಆಚರಿಸುತ್ತಿದ್ದು, ರಕ್ತದಾನ ಶಿಬಿರ, ಸಾಮರಸ್ಯ ಮತ್ತು ಐಕ್ಯಮತಕ್ಕಾಗಿ ವಾಕಾಥಾನ್, ಸಸಿ ನೆಡುವುದು, ಶ್ರಮದಾನಕ್ಕೆ ಚಾಲನೆ ನೀಡಲಾಗಿದೆ. ರಕ್ತದಾನ ಶಿಬಿರದಲ್ಲಿ ಕನಿಷ್ಠ 75 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇದ. ಸೆ. 25ರಂದು ಜನಸಂಘದ ನಾಯಕ ಹಾಗೂ ಬಿಜೆಪಿ ಮುಂದಾಳು ಪಂ.ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಬೂತ್‌ಮಟ್ಟದಲ್ಲಿ ಅವರ ವಿಚಾರಧಾರೆ ಮಂಡನೆ, ದೇಶಪ್ರೇಮ ಹಾಗೂ ಚಿಂತನೆಗಳ ಬಗ್ಗೆ ವಿಚಾರ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಬಿಜೆಪಿ ಕಡೂರು ಮಂಡಲ ಅಧ್ಯಕ್ಷ ದೇವಾನಂದ್, ಸಿದ್ದಪ್ಪ, ಟಿ.ಆರ್.ಲಕ್ಕಪ್ಪ, ಡಾ.ಉಮೇಶ್‌ರಾವ್, ಟಿ.ಡಿ.ಸತ್ಯನ್, ವಕ್ತಾರ ಶಾಮಿಯಾನಾ ಚಂದ್ರು, ಮಾರ್ಗದ ಮಧು, ಕೆ.ವಿ.ಪೃಥ್ವಿ, ಮಲ್ಲಿಕಾರ್ಜುನ್ ಸಿ., ಕೆ.ಎನ್.ಬೊಮ್ಮಣ್ಣ, ಪುರಸಭೆ ಸದಸ್ಯರಾದ ಗೋವಿಂದರಾಜು, ವಿಜಯಾ ಚಿನ್ನರಾಜು, ಸುಬ್ಬಣ್ಣ, ಮೋಹನ್ ನಾಯ್ಕ, ಮುಖಂಡರಾದ ರಾಜಾನಾಯ್ಕ, ರೋಟರಿ ರಾಘವೇಂದ್ರ, ನಾಗೇಶ್, ಎಚ್.ಉಮೇಶ್, ರೋಟರಿಯನ್ ರಾಘವೇಂದ್ರ, ಹುಲ್ಲೇಹಳ್ಳಿ ಲಕ್ಷ್ಮಣ್, ಸುದರ್ಶನ್, ಗಿರೀಶ್ ಗುರುಕುಲ, ವೀಣಾ, ಕಾವೇರಿ ಲಕ್ಕಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.