ತೆಂಗಿನ ಕಾಯಿ
ಕಡೂರು: ತೆಂಗಿನಕಾಯಿ ಹಾಗೂ ಎಳನೀರಿಗೆ ಭಾರಿ ಬೇಡಿಕೆ ಉಂಟಾಗಿ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿದೆ. ಆದರೆ, ದರ ಏರಿಕೆಯ ಲಾಭ ರೈತರಿಗೆ ಸಿಗುತ್ತಿಲ್ಲ.
ಕಡೂರು ಭಾಗದ ಎಳನೀರನ್ನು ಮುಂಬೈ, ದೆಹಲಿ, ಹರಿಯಾಣಕ್ಕೆ ಕಳುಹಿಸಲಾಗುತ್ತದೆ. ಎಳನೀರು ವ್ಯಾಪಾರಿಗಳು ತೋಟಗಳಿಗೆ ತೆರಳಿ ಒಂದು ಎಳನೀರಿಗೆ ₹15ರಿಂದ ₹20 ದರ ನೀಡಿ ಖರೀದಿಸುತ್ತಾರೆ. ಹೆಚ್ಚು ಬೆಲೆ ಸಿಕ್ಕಿದ್ದರಿಂದ ತೆಂಗು ಬೆಳೆಗಾರರು ಎಳನೀರು ಮಾರಾಟಕ್ಕೆ ಒಲವು ತೋರಿ ಪೈಪೋಟಿ ಮೇಲೆ ಮಾರಾಟ ಮಾಡಿದ್ದರು. ಆದರೆ, ಬೇಸಿಗೆಯ ಸಂದರ್ಭದಲ್ಲಿ ಎಳನೀರು ಲಭ್ಯತೆ ಕಡಿಮೆಯಾಗಿದೆ. ವ್ಯಾಪಾರಿಗಳು ₹20ರಿಂದ 22 ನೀಡಲು ತಯಾರಿದ್ದರೂ ಎಳನೀರು ಸಿಗುತ್ತಿಲ್ಲ.
ಎಳನೀರನ್ನು ಹೆಚ್ಚಿನ ಮಾರಾಟ ಮಾಡಿದ್ದರಿಂದ ತೆಂಗಿನಕಾಯಿಯ ದರ ಹೆಚ್ಚಿದೆ. ಚಿಲ್ಲರೆಯಾಗಿ ₹50ರಿಂದ ₹60ಕ್ಕೆ ತೆಂಗಿನಕಾಯಿ ಮಾರಾಟವಾಗುತ್ತಿದೆ. ಕೆಲ ರೈತರು ಎಳನೀರು- ಕಾಯಿ ಮಾರಾಟ ಮಾಡದೆ ಕೊಬ್ಬರಿ ಉತ್ಪಾದನೆಗೆ ಮುಂದಾಗಿದ್ದಾರೆ.
ತೆಂಗಿನ ಮರಗಳನ್ನು ವಿವಿಧ ರೋಗಗಳು ಬಾಧಿಸುತ್ತಿರುವುದೂ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ತೆಂಗಿನ ಮರಗಳಿಗೆ ನುಸಿ ರೋಗ, ಗರಿ ರೋಗ ಬಾಧಿಸುತ್ತಿದೆ. ಗರಿ ರೋಗದಿಂದ ತೋಟಗಳು ಬೆಳ್ಳಗಾಗಿ ಕಾಣಿಸುತ್ತಿವೆ. ವೈಟ್ ಫ್ಲೈ ಎಂಬ ಕೀಟದಿಂದ ತೆಂಗಿನ ಗರಿಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ರಸಸೋರುವ ರೋಗವೂ ತೆಂಗನ್ನು ಕಾಡತೊಡಗಿದೆ.
ಒಂದೂವರೆ ಲಕ್ಷ ಮರಗಳಿಗೆ ರೋಗ
ಕಡೂರು ತಾಲ್ಲೂಕಿನಲ್ಲಿ 5 ಲಕ್ಷ ತೆಂಗಿನ (50 ಸಾವಿರ ಹೆಕ್ಟೆರ್) ಮರಗಳಿವೆ. ಈ ಪೈಕಿ 19 ಸಾವಿರ ಹೆಕ್ಟೆರ್ನಲ್ಲಿ (1.50 ಲಕ್ಷ ಮರಗಳು) ಗರಿರೋಗ, ಕಾಂಡ ಸೋರುವ ರೋಗ, ವೈಟ್ ಫ್ಲೈ ಬಾಧಿಸಿವೆ. ಹೆಚ್ಚಿನ ಬಾಧೆ ತಾಲ್ಲೂಕಿನ ಯಗಟಿ, ಸಿಂಗಟಗೆರೆ, ಪಂಚನಹಳ್ಳಿ ಹೋಬಳಿಗಳಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.