ಕಡೂರು: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿದ್ದ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಡಳಿತ ವೈದ್ಯಾಧಿಕಾರಿಗಳ ನೇಮಕವಾಗಿದ್ದು, ಜನರು ಬಹಳ ದಿನಗಳಿಂದ ಎದುರಿಸುತ್ತಿದ್ದ ತೊಂದರೆಗೆ ಪರಿಹಾರ ಲಭಿಸಿದೆ.
ತಾಲ್ಲೂಕಿನಲ್ಲಿರುವ ಒಟ್ಟು 25 ಪ್ರಾಥಮಿಕ ಆರೊಗ್ಯ ಕೇಂದ್ರಗಳ ಪೈಕಿ 8 ಕೇಂದ್ರಗಳಲ್ಲಿ ಕಾಯಂ ವೈದ್ಯಾಧಿಕಾರಿಗಳು ಇರಲಿಲ್ಲ. ಬದಲಿ ವ್ಯವಸ್ಥೆಯಾಗಿ ಅಯುಷ್ ವೈದ್ಯರ ಸೇವೆ ಪಡೆಯಲಾಗಿತ್ತು.
ಸರ್ಕಾರಿ ಆಸ್ಪತ್ರೆಗಳಲ್ಲಿ ನಿಡುವ ವೈದ್ಯ ಪದ್ದತಿಗೂ ಆಯುರ್ವೇದ ವೈದ್ಯ ಪದ್ದತಿಗೂ ವ್ಯತ್ಯಾಸವಿದೆ. ಆಯುಷ್ ವೈದ್ಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದರೂ ಕೆಲ ಸಂದರ್ಭದಲ್ಲಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ಆಯುಷ್ ವೈದ್ಯರ ಸೇವೆ ಶ್ಲಾಘನೀಯ. ಆದರೆ, ಬಹಳಷ್ಟು ಜನ ಆಯುಷ್ ವೈದ್ಯರಿರುವ ಆಸ್ಪತ್ರೆ ಬಿಟ್ಟು ಎಂಬಿಬಿ.ಎಸ್ ವೈದ್ಯರಿರುವ ಕಡೆಯೇ ಹೋಗುತ್ತಿದ್ದರಿಂದ ಇತರೆ ಪ್ರಾಥಮಿಕ ಕೇಂದ್ರಗಳ ವೈದ್ಯರ ಮೇಲೆಯೂ ಅತೀವ ಒತ್ತಡವಿತ್ತು.
ಇದೀಗ ತಾಲ್ಲೂಕಿನ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಗಳ ನೇಮಕವಾಗಿದೆ. ಈ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯವೂ ಸುಧಾರಿಸಿದೆ. ಇತರೆ ಆರೋಗ್ಯ ಕೇಂದ್ರಗಳ ಮೇಲೆ ಒತ್ತಡ ಕಡಿಮೆಯಾಗುವುದರ ಜೊತೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುವ ಆಶಾಭಾವನೆ ಚಿಗುರೊಡೆದಿದೆ.
ತಾಲ್ಲೂಕಿನಲ್ಲಿ ಸಖರಾಯಪಟ್ಟಣ, ನಿಡಘಟ್ಟ, ಸಿಂಗಟಗೆರೆ, ಮತಿಘಟ್ಟ, ಚೌಳಹಿರಿಯೂರು, ಕುಂಕನಾಡು, ಚಿಕ್ಕಬಳ್ಳೇಕೆರೆ, ಹೋಚಿಹಳ್ಳಿ, ಹುಲಿಕೆರೆ, ಗರ್ಜೆ, ಹಿರೇನಲ್ಲೂರು, ಆಸಂಧಿ, ಉಳಿಗೆರೆ, ಬಾಣೂರು, ಗಂಗನಹಳ್ಳಿ, ಬಿಸಲೇಹಳ್ಳಿ, ದೇವನೂರು, ಎಸ್. ಬಿದರೆ, ಜಿಗಣೇಹಳ್ಳಿ, ಹೊಗರೆಹಳ್ಳಿ, ಯಳ್ಳಂಬಳಸೆ, ತಂಗಲಿ, ಬಾಸೂರು, ಬಳ್ಳೇಕೆರೆ, ಅಂತರಘಟ್ಟೆ ಸೇರಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಯಗಟಿ ಸಮುದಾಯ ಅರೋಗ್ಯ ಕೇಂದ್ರ ಮತ್ತು ಬಾಸೂರು ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.