ಕಡೂರು: ತಾಲ್ಲೂಕು ಸರ್ವೆ ಅಭಿಲೇಖಾಲಯದ ಕೊಠಡಿ ಮಳೆಗೆ ಸೋರುತ್ತಿವೆ. ತೊಟ್ಟಿಕ್ಕುವ ಹನಿಗಳಿಂದ ಭೂದಾಖಲೆಗಳು ಹಾಳಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಕಡೂರು ತಾಲ್ಲೂಕು ಕಚೇರಿ ಮೇಲ್ಭಾಗದಲ್ಲಿರುವ ಸರ್ವೆ ಅಭಿಲೇಖಾಲಯದಲ್ಲಿ 120 ವರ್ಷಗಳ ಹಿಂದಿನ ಹಳೆಯ ದಾಖಲೆಗಳು, ತಾಲ್ಲೂಕಿನ ಕೃಷಿ, ಸರ್ಕಾರಿ, ಅರಣ್ಯ ಜಮೀನುಗಳ ಮೂಲ ದಾಖಲೆಗಳು, ಆಕಾರ ಬಂದ್, ಆರ್.ಆರ್. ಪಕ್ಕಾ, ಟಿಪ್ಪಣಿ ಮುಂತಾದ ಪ್ರಮುಖ ದಾಖಲೆಗಳಿವೆ.
ಮಳೆಯಿಂದ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸ್ವಂತ ವೆಚ್ಚದಿಂದ ಕೊಠಡಿ ಮೇಲ್ಭಾಗಕ್ಕೆ ಟಾರ್ಪಾಲ್ ಕಟ್ಟಿದ್ದಾರೆ. ಆದರೂ, ಬಹಳಷ್ಟು ದಾಖಲೆಗಳು ನೀರಿನಲ್ಲಿ ನೆನೆದು ಅಕ್ಷರಗಳು ಅಳಿಸಿಹೋಗಿವೆ. ಬ್ರಿಟಿಷರ ಕಾಲದ ಕೆಲವು ದಾಖಲೆಗಳು ಸಹ ಇಲ್ಲಿದ್ದು, ಅವುಗಳನ್ನು ಸೂಕ್ಷ್ಮವಾಗಿ ತೆಗೆದು ನೋಡಬೇಕಾಗುತ್ತದೆ. ಈ ದಾಖಲೆಗಳ ಮೇಲೆ ನೀರು ಬಿದ್ದರೆ ಸಂಪೂರ್ಣ ನಾಶವಾಗುವ ಸಂಭವವಿದ್ದು, ಕೂಡಲೇ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
‘ಟಾರ್ಪಾಲ್ ಹಾಕಿರುವುದು ತಾತ್ಕಾಲಿಕ ವ್ಯವಸ್ಥೆ. ಸತತವಾಗಿ ಮಳೆ ಬಂದರೆ ಇಲ್ಲಿರುವ ಎಲ್ಲ ದಾಖಲೆಗಳು ನಾಶವಾಗುವ ಸಂಭವವಿದ್ದು, ಸಂಬಂಧಿಸಿದವರು ಕೂಡಲೇ ಸರ್ವೆ ಅಭಿಲೇಖಾಲಯಕ್ಕೆ ಸುರಕ್ಷಿತ ಕೊಠಡಿ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಸರ್ವೆ ದಾಖಲೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ದಾಖಲೆಗಳನ್ನು ಕೂಡಲೇ ಸುರಕ್ಷಿತ ಕೊಠಡಿಗೆ ಸ್ಥಳಾಂತರಿಸಬೇಕು.
-ಟೊಮೆಟೊ ಗೌಡ ಸರಸ್ವತೀಪುರ
ಎಲ್ಲ ದಾಖಲೆಗಳನ್ನು ಶೀಘ್ರ ಡಿಜಿಟಲೈಸ್ ಮಾಡಬೇಕು. ಅಲ್ಲಿಯ ತನಕ ದಾಖಲೆಗಳನ್ನು ಸುರಕ್ಷಿತವಾಗಿಡಲು ತುರ್ತು ಕ್ರಮ ಕೈಗೊಳ್ಳಬೇಕು.
-ಸಿ.ಎಸ್. ಮಧುಸೂದನ್ ಚೆನ್ನಾಪುರ
ಭೂ ದಾಖಲೆಗಳ ರಕ್ಷಣೆಗೆ ಸೂಕ್ತ ಕ್ರಮಕ್ಕೆ ವಿನಂತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು
-ಟಿ.ಕೆ. ಲೋಹಿತ್ ಸರ್ವೆ ಭೂ ದಾಖಲೆಗಳ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.