
ಅಜ್ಜಂಪುರ: ‘ಕಾಲ ಪ್ರವಾಹದಲ್ಲಿ ಕನ್ನಡ ಭಾಷೆ ದುರ್ಬಲ ಆಗಬಾರದು, ಅಳಿಸಿಯೂ ಹೋಗಬಾರದು. ಈ ದಿಸೆಯಲ್ಲಿ ಕನ್ನಡಿಗರಾದ ನಾವು, ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಿ–ಬೆಳೆಸಬೇಕು. ಇದು ನಮ್ಮೆಲ್ಲರ ಸಮುದಾಯದ ಜವಾಬ್ದಾರಿ ಆಗಿದೆ’ ಎಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮಂಜುನಾಥ ಅಜ್ಜಂಪುರ ಅಭಿಪ್ರಾಯಪಟ್ಟರು.
ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದ ಎಸ್.ಎಲ್. ಭೈರಪ್ಪ ಮಹಾಮಂಟಪದಲ್ಲಿ ನಡೆದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1950- 90ರ ದಶಕದಲ್ಲಿ ಪಟ್ಟಣ ಆರ್ಥಿಕವಾಗಿ ಬಡವಾಗಿತ್ತು. ಆದರೆ, ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿತ್ತು. ಇಂದು ಆರ್ಥಿಕವಾಗಿ ಸಶಕ್ತವಾಗಿದೆ, ಜತೆಗೆ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳು ಬಿರುಸುಗೊಂಡಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಅಜ್ಜಂಪುರ ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು. ಇಲ್ಲಿ ಸಮ್ಮೇಳನ ಮೂಲಕ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ವಿಚಾರಗಳು ಮತ್ತಷ್ಟು ಪ್ರಚಲಿತಗೊಳಿಸುವಂತೆ ಮಾಡಿರುವುದು ಹರ್ಷ ತಂದಿದೆ. ಇಂತಹ ಚಟುವಟಿಕೆ ಆಯೋಜಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್, ಪಟ್ಟಣ ಭಾಷೆ-ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಾ ಬಂದಿದೆ. ಈ ನೆಲದ ಸರ್ಕಸ್ ಸುಬ್ಬರಾಯ, ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಶೆಟ್ಟಿ, ಜೋಗಿ ತಿಮ್ಮಯ್ಯ, ಸಾಹಿತ್ಯಿಕವಾಗಿ ಕಥೆಗಾರ ಆನಂದ್, ಅಜ್ಜಂಪುರ ಸೂರಿ ಶ್ರೀಮಂತಗೊಳಿಸಿದ್ದಾರೆ. ಅದನ್ನು ಕಾಪಾಡಿಕೊಳ್ಳುವ ಹೊಣೆಯನ್ನು ನಾವೆಲ್ಲಾ ಹೊರಬೇಕಿದೆ ಎಂದು ಮನವಿ ಮಾಡಿದರು.
ಪರಿಷತ್ತು ಗೌರವ ಸಲಹೆಗಾರ ಎ.ಸಿ. ಚಂದ್ರಪ್ಪ, ಪಟ್ಟಣದಲ್ಲಿ ನಶಿಸುತ್ತಿರುವ ರಂಗ ಚಟುವಟಿಕೆ ಪುನರಾರಂಭಿಸಬೇಕು. ಈ ನಿಟ್ಟಿನಲ್ಲಿ ಶಿಥಿಲಾವಸ್ಥೆಗೆ ಜಾರುತ್ತಿರುವ ರಂಗಚಟುವಟಿಕೆ ಕೇಂದ್ರ ಕಲಾಶ್ರೀ ರಂಗಮಂದಿರವನ್ನು ಪುನಶ್ಚೇತನಗೊಳಿಸಬೇಕು. ಕಲೆ-ಸಾಹಿತ್ಯ-ಸಂಗೀತ-ನಾಟಕ ಚಟುವಟಿಕೆ ನಿರಂತರವಾಗಿ ನಡೆಯುವಂತೆ ಮಾಡಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎಚ್.ಆರ್. ಚಂದ್ರಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ, ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಂಜುನಾಥ್ ಅಜ್ಜಂಪುರ ಅವರು ಸಮ್ಮೇಳನಾಧ್ಯಕ್ಷರಾಗಿರುವುದು ಸಮ್ಮೇಳನಕ್ಕೆ ಮೆರುಗು ತಂದಿದೆ ಎಂದರು.
ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ಕೃಷ್ಣಮೂರ್ತಿ ಬಿಡುಗಡೆಗೊಳಿಸಿದರು. ಪರಿಷತ್ ಕೋಶಾಧ್ಯಕ್ಷ ಪ್ರಹ್ಲಾದ್, ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಪಟ್ಟಡ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಕವಿತಾ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ನಟರಾಜ್, ಸದಸ್ಯ ಗಿರೀಶ್ ಚೌಹ್ವಾಣ್, ತಿಪ್ಪೇಶ್ ಮಡಿವಾಳ್, ಮಹೇಂದ್ರಾಚಾರ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್. ಕೃಷ್ಣಪ್ಪ, ಎಸ್.ಎಸ್. ವೆಂಕಟೇಶ್, ಹೊಯ್ಸಳ ಕ್ಲಬ್ ಅಧ್ಯಕ್ಷ ಕೇಶವಮೂರ್ತಿ, ದಲಿತ ಸಂಘರ್ಷ ಸಮಿತಿಯ ಮಹೇಂದ್ರ ಸ್ವಾಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್, ಪ್ರಾಧ್ಯಾಪಕ ಆನಂದ್, ನವೀನ್, ಮೋಹನ್ ಜಾದಾವ್, ಬಿಪಿನ್, ಕಾಂತರಾಜ್, ಅರುಣ್, ವಿಜಯಕುಮಾರಿ, ಮಧುಮಾಲತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.