ಕೆ.ಜೆ.ಜಾರ್ಜ್
ಚಿಕ್ಕಮಗಳೂರು: ‘ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ 120 ಎಕರೆಯಷ್ಟೇ ಬಳಕೆಯಾಗಲಿದ್ದು, ಹೆಚ್ಚುವರಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಯೋಜನೆಗೆ ಗುರುತಿಸಿರುವ ಪ್ರದೇಶದಲ್ಲಿ ಸರ್ಕಾರದ ಜಾಗವೇ ಇದೆ. 40 ಎಕರೆಯಷ್ಟು ಖಾಸಗಿ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು’ ಎಂದು ಅವರು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದರು.
‘ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಬೇಕು. ನೆಲದಡಿ ಪೈಪ್ಲೈನ್ ಮೂಲಕ ನೀರು ಹರಿಯಲಿದೆ. ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಆ ಜಾಗದಲ್ಲೂ ಅರಣ್ಯ ಬೆಳೆಸಲು ಅವಕಾಶ ಇದೆ. ಇವೆಲ್ಲವನ್ನೂ ತಜ್ಞರು ಪರಿಶೀಲಿಸಿಯೇ ಅನುಮತಿ ನೀಡುತ್ತಾರೆ’ ಎಂದರು.
‘ಶಿವನಸಮುದ್ರ ಯೋಜನೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅನುಷ್ಠಾನಗೊಂಡಿತ್ತು. ‘ವಿದ್ಯುತ್ ಉತ್ಪಾದನೆ ಮಾಡಿದರೆ ನೀರಿನ ಸತ್ವ ಹೋಗುತ್ತದೆ, ಆ ನೀರನ್ನು ಕೃಷಿಗೆ ಬಳಸಲು ಆಗುವುದಿಲ್ಲ’ ಎಂದು ಸ್ವಹಿತಾಸಕ್ತಿಯ ಕೆಲವರು ಸುಳ್ಳು ಹಬ್ಬಿಸಿದ್ದರು. ಅಂಥ ಜನ ಎಲ್ಲಾ ಕಾಲದಲ್ಲೂ ಇರುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.